ಸಾವಿಗೂ ಮುನ್ನ ರಜೆ ಕೋರಿದ್ದ ತಿವಾರಿ, ಮನವಿ ತಿರಸ್ಕರಿಸಿದ್ದ ಅಧಿಕಾರಿ?

ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡತೊಡಗಿದ್ದು, ಸಾವಿಗೂ ಮುನ್ನ ತಿವಾರಿಯವರೂ ರಜೆ ನೀಡುವಂತೆ ಮನವಿ ಮಾಡಿಕೊಂಡಿದ್ದರೂ...
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ
ಲಖನೌ: ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡತೊಡಗಿದ್ದು, ಸಾವಿಗೂ ಮುನ್ನ ತಿವಾರಿಯವರೂ ರಜೆ ನೀಡುವಂತೆ ಮನವಿ ಮಾಡಿಕೊಂಡಿದ್ದರೂ, ಆ ಮನವಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ತಿರಸ್ಕರಿಸಿದ್ದರು ಎಂಬ ಮಾತುಗಳು ಇದೀಗ ಕೇಳಿಬರತೊಡಗಿವೆ. 
ಜೀವಕ್ಕೆ ಅಪಾಯ ಇರುವುದು ಮೊದಲೇ ಗೊತ್ತಾಗಿದ್ದರಿಂದ ಅನುರಾಗ್ ಅವರು ಬದಲಾವಣೆ ಬಯಸಿದ್ದರು. ತೀವ್ರ ಒತ್ತಡಕ್ಕೆ ಸಿಲುಕ್ಕಿದ್ದರಿಂದಾಗಿ ರಜೆ ನೀಡುವಂತೆ ಕರ್ನಾಟಕ ಸರ್ಕಾರವನ್ನು ಕೋರಿದ್ದರು. ಆದರೆ, ತಿವಾರಿಯವರ ರಜೆ ಮನವಿಯನ್ನು ತಿರಸ್ಕರಿಸಿದ್ದ ಹಿರಿಯ ಅಧಿಕಾರಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ. 
ತಿವಾರಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಅವರು, ಅನುರಾಗ್ ಅವರು ಮೇ.8-18ರವರೆಗೂ ರಜೆ ನೀಡುವಂತೆ ಮಾಡಿದ್ದರು. ಇದರಂತೆ ರಜೆ ನೀಡಲಾಗಿತ್ತು ಎಂದು ಹೇಳಿದ್ದರು. 
ಆದರೆ, ವರದಿಗಳು ತಿಳಿಸಿರುವ ಪ್ರಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮೇ.11 ರಂದು ರಜೆಯನ್ನು ನಿರಾಕರಿಸಿದ್ದರು ಎಂದು ಹೇಳುತ್ತಿವೆ. ಇದಕ್ಕೆ ಇಂಬು ನೀಡುವಂತೆ ತಿವಾರಿ ಮನೆಯವರೂ ಕೂಡ ರಜೆ ಮನವಿಯನ್ನು ಸರ್ಕಾರ ತಿರಸ್ಕರಿಸಿತ್ತು ಎಂದು ಆರೋಪಗಳನ್ನು ಮಾಡುತ್ತಿದ್ದಾರೆ. 
ತಿವಾರಿಯವರ ರಜೆ ಮನವಿ ಕುರಿತಂತೆ ಇದೀಗ ಸಾಕಷ್ಟು ಗೊಂದಲಗಳು ಮೂಡತೊಡಗಿದ್ದು, ಸರ್ಕಾರದ ಅಧಿಕಾರಿಗಳು ಈ ಪ್ರತಿಕ್ರಿಯೆ ನೀಡಿದ್ದು, ರಜೆ ನೀಡುವುದು, ತಿರಸ್ಕರಿಸುವುದು ಆಡಳಿತದ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. 
ನಿಗೂಢವಾಗಿ ಸಾವನ್ನಪ್ಪಿದ್ದ ತಿವಾರಿ ಅವರ ಪ್ರಕರಣವನ್ನು ಭೇದಿಸಲು ಉತ್ತರಪ್ರದೇಶ ಪೊಲೀಸ್ ಇಲಾಖೆ ವಿಶೇಷ ತಂಡವೊಂದನ್ನು ರಚನೆ ಮಾಡಿದ್ದು. ಮುಂದಿನ 72 ಗಂಟೆಗಳಲ್ಲಿ ವರದಿ ನೀಡಲು ತಂಡಕ್ಕೆ ಸೂಚನೆ ನೀಡಿದೆ. 
2007ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಅನುರಾದ್ ತಿವಾರಿ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. 1981 ಮೇ.17 ರಂದು ಜನಿಸಿದ್ದ ತಿವಾರಿಯವರು ಹುಟ್ಟುಹಬ್ಬದ ದಿನದಂದೆ ನಿಗೂಢವಾಗಿ ಮೃತಪಟ್ಟಿದ್ದರು. 
ಜನಪ್ರಿಯ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರು ಬೀದರ್ ಮತ್ತುಮಧುಗಿರಿಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಉತ್ತರಪ್ರದೇಶ ಬಹ್ರಾಯ್ಚ್ ನಿವಾಸಿಯಾಗಿರುವ ತಿವಾರಿ ಲಖನೌ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ (ಬಿ.ಟೆಕ್) ಪದವಿ ಪಡೆದ ಬಳಿ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ಸೇರ್ಪಡೆಗೊಂಡಿದ್ದರು. 
ಮಧುಗಿರಿಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಆರಂಭಿಸಿದ್ದ ತಿವಾರಿ ಕೊಡಗು ಜಿಲ್ಲಾಧಿಕಾರಿಯಾಗಿ, ಸರ್ಕಾರದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2016 ಡಿಸೆಂಬರ್ 22 ರಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com