"ಸುಪ್ರೀಂ" ತೀರ್ಪು ಅಮಾನತು ಮಾಡುವಂತೆ ರಾಷ್ಟ್ರಪತಿ ಮೊರೆ ಹೋದ ನ್ಯಾ.ಕರ್ಣನ್!
ನವದೆಹಲಿ: ತಮ್ಮ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅಮಾನತು ಮಾಡುವಂತೆ ಕೋರಿ ನ್ಯಾಯಮೂರ್ತಿ ಕರ್ಣನ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯಾಂಗ ನಿಂದನೆ ಪ್ರಕರಣ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೇ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ನಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಕರ್ಣನ್ ಅವರು, ತಮ್ಮ ವಿರುದ್ಧದ ತೀರ್ಪನ್ನು ಅಮಾನತು ಮಾಡುವಂತೆ ಕೋರಿ ರಾಷ್ಟ್ರಪತಿ ಮುಖರ್ಜಿ ಅವರ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರಪತಿಗಳ ಸಚಿವಾಲಯ ನ್ಯಾ.ಕರ್ಣನ್ ಅವರಿಂದ ಅಧಿಕೃತವಾಗಿ ಯಾವುದೇ ಮನವಿಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೆಲ ವಕೀಲರು ಹೇಳಿರುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರು ನ್ಯಾಯಾಂಗ ನಿಂದನೆ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೇ ಜೈಲು ಶಿಕ್ಷೆ ವಿಧಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಅಪಹಾಸ್ಯಕ್ಕೀಡು ಮಾಡಿದ್ದ ಆರೋಪದ ಮೇರೆಗೆ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಕರ್ಣನ್ ಅವರಿಗೆ 6 ತಿಂಗಳ ಸಜೆ ವಿಧಿಸಿದ್ದರು. ಈ ತೀರ್ಪನ್ನು ಅಮಾನತುಗೊಳಿಸಬೇಕು ಎಂದು ಕೋರಿ ಕರ್ಣನ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಬಳಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂವಿಧಾನದ ಕಲಂ ರ ಅಡಿಯಲ್ಲಿ ಯಾವುದೇ ಅಪರಾಧದ ಅಡಿಯಲ್ಲಿ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಒಳಗಾದ ಯಾವುದೇ ವ್ಯಕ್ತಿಯ ಶಿಕ್ಷೆಯನ್ನು ಸ್ಥಗಿತ/ರದ್ದುಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗಿದೆ. ತಮ್ಮ ಉನ್ನತಾಧಿಕಾರವನ್ನು ಬಳಕೆ ಮಾಡಿ ಶಿಕ್ಷೆಯನ್ನು ರಾಷ್ಟ್ರಪತಿಗಳು ಅಮಾನತು ಮಾಡಬಹುದಾಗಿದೆ.