ಮುಂಬೈ: ಶೀನಾ ಹತ್ಯೆಯಾದ ಬಳಿಕ ಕಾರು ಚಾಲಕ ಹಣ ಪಡೆದುಕೊಂಡಿದ್ದ ಎಂಬ ಆರೋಪವನ್ನು ಶ್ಯಾಮ್ವಾರ್ ರೈ ಬುಧವಾರ ತಿರಸ್ಕರಿಸಿದ್ದಾನೆ.
ಶ್ಯಾಮ್ವಾರ್ ರೈ ಇಂದ್ರಾಣಿ ಮುಖರ್ಜಿ ಕಾರು ಚಾಲಕನಾಗಿದ್ದು, ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಇಂದ್ರಾಣಿ ಮುಖರ್ಜಿ ಪರ ವಕೀಲ ಸುದೀಪ್ ಪಾಸ್ಬೊಲಾ ಅವರು, ಶೀನಾ ಹತ್ಯೆಯಾದ ಬಳಿಕ ಕಾರು ಚಾಲಕ ಶ್ಯಾಮ್ವಾರ್ ರೈ ರೂ.5 ಲಕ್ಷ ಹಣವನ್ನು ಪಡೆದುಕೊಂಡಿದ್ದ. ಹಣ ಪಡೆದುಕೊಂಡ ಬಳಿಕ ಮಧ್ಯಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಎಂದು ಹೇಳಿದ್ದಾರೆ.
ಈ ಆರೋಪವನ್ನು ಶ್ಯಾಮ್ವಾರ್ ರೈ ತಿರಸ್ಕರಿಸಿದ್ದು, ಹತ್ಯೆಯಾದ ಬಳಿಕ ಇಂದ್ರಾಣಿಯವರ ಬಳಿ ನಾನು ಯಾವುದೇ ರೀತಿಯ ಹಣವನ್ನು ಪಡೆದುಕೊಂಡಿರಲಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ಶೀನಾ ಮೃತದೇಹವನ್ನು ಸುಟ್ಟ ಸ್ಥಳದಲ್ಲಿ ಯಾವುದೇ ರೀತಿಯ ಪರಿಶೀಲನೆಗಳನ್ನು ನಡೆಸಿರಲಿಲ್ಲ ಎಂದು ತಿಳಿಸಿದ್ದಾರೆ.