ದೆಹಲಿಯ ಒಂದು ಪ್ರದೇಶದಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ
ದೆಹಲಿಯ ಒಂದು ಪ್ರದೇಶದಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯ

ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ ಮಟ್ಟ: 20 ವಿಮಾನಗಳ ಹಾರಾಟ ವಿಳಂಬ

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ತೀವ್ರ ಹೆಚ್ಚಾಗಿರುವ ...
Published on
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಸಾರ್ವಜನಿಕ ಆರೋಗ್ಯ ತುರ್ತನ್ನು ಘೋಷಿಸಿದೆ.
ಶಾಲೆಗಳನ್ನು ಕೆಲ ದಿನಗಳ ಮಟ್ಟಿಗೆ ಮುಚ್ಚಲು ಹವಾಮಾನ ಇಲಾಖೆ ಸೂಚಿಸಿದ್ದು ಜನರು ಆದಷ್ಟು ಮನೆ ಬಿಟ್ಟು ಹೊರ ಹೋಗದಂತೆ ತಿಳಿಸಲಾಗಿದೆ. ಮಾಲಿನ್ಯದಿಂದ ಮತ್ತು ದಟ್ಟ ಮಂಜು ಕವಿದಿದ್ದರಿಂದ 20 ವಿಮಾನಗಳ ಹಾರಾಟ ವಿಳಂಬವಾಗಿದೆ. 
ವೈದ್ಯರ ಒಕ್ಕೂಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರಿಗೆ ಪತ್ರ ಬರೆದು ವಾಯುಮಾಲಿನ್ಯ ಮಟ್ಟ ಅಧಿಕ ಪ್ರಮಾಣದಲ್ಲಿರುವುದರಿಂದ ಇದೇ 19ರಂದು ಆಯೋಜಿಸಲಾಗಿರುವ ಏರ್ ಟೆಲ್ ದೆಹಲಿ ಹಾಫ್ ಮ್ಯಾರಥಾನ್ ನ್ನು ರದ್ದುಪಡಿಸುವಂತೆ ಕೋರಿದೆ.
ಇಂದು ನಸುಕಿನ ಜಾವದಿಂದ ದೆಹಲಿ ಸುತ್ತಮುತ್ತ ವಾಯುಮಾಲಿನ್ಯ ದಟ್ಟವಾಗಿ ಕವಿದಿದ್ದು, ನಿಗದಿತ ಮಟ್ಟಕ್ಕಿಂತ ಬಹಳಷ್ಟು ಏರಿಕೆಯಾಗಿದೆ. ವಾಯುಮಾಲಿನ್ಯ ದಟ್ಟವಾಗಿದ್ದರಿಂದ ಮತ್ತು ಮಂಜು ಮುಸುಕಿದ್ದರಿಂದ ನಗರದಾದ್ಯಂತ ದಟ್ಟ ಮಂಜು ಕವಿದ ವಾತಾವರಣ ಕಂಡುಬರುತ್ತಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅತ್ಯಂತ ಗರಿಷ್ಠ ಮಟ್ಟದಲ್ಲಿ ವಾಯುಮಾಲಿನ್ಯ ದಾಖಲಾಗಿದೆ.
ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 420 ಆಗಿದ್ದರೆ, ಆನಂದ್ ವಿಹಾರದಲ್ಲಿ 319 ಆಗಿದೆ. ಪಂಜಾಬ್ ಬಾಗ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 999 ಮತ್ತು ಆರ್ ಕೆ ಪುರಂನಲ್ಲಿ 852 ಆಗಿದೆ. ದ್ವಾರಕದಲ್ಲಿ ಮತ್ತು ಎನ್ ಸಿಆರ್ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400ರಿಂದ 420 ಆಗಿದೆ.
ವಾಯು ಗುಣಮಟ್ಟ ಸೂಚ್ಯಂಕ 0ಯಿಂದ 50ರೊಳಗಿದ್ದರೆ ಉತ್ತಮ, 51ರಿಂದ 100ರೊಳಗಿದ್ದರೆ ಸಮಧಾನಕರ, 101ರಿಂದ 200ರೊಳಗಿದ್ದರೆ ಸಾಧಾರಣ, 201ರಿಂದ 300 ಇದ್ದರೆ ಕಳಪೆ, 301ರಿಂದ 400 ಇದ್ದರೆ ಅತಿ ಕಳಪೆ ಮತ್ತು 401ರಿಂದ ಮೇಲಿದ್ದರೆ ಕಠಿಣ ಎಂದು ವಿಭಾಗಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com