ನವದೆಹಲಿ: ಗುರುಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಸ್ ಕಂಡಕ್ಟರ್ ಗೆ ಕ್ಲೀನ್ ಚಿಟ್ ನೀಡಿದೆ.
ಸೆ .8ರಂದು ಎಂದಿನಂತೆ ಶಾಲೆಗೆ ತೆರಳಿದ್ದ ಪ್ರದ್ಯುಮನ್ ಠಾಕೂರ್ ಮೃತದೇಹ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಾಲಕನ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತನಿಖೆ ವೇಳೆ ಅಧಿಕಾರಿಗಳು ತಿಳಿಸಿದ್ದಾರೆ. ಏಳು ವರ್ಷದ ಬಾಲಕ ಪ್ರದ್ಯುಮ್ನ ಠಾಕೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಪರೀಕ್ಷೆ ಹಾಗೂ ಪೋಷಕರು-ಶಿಕ್ಷಕರ ಸಭೆಯನ್ನು ಮುಂದೂಡಲು ಸಹಕಾರಿಯಾಗುತ್ತದೆ ಎಂಬ ದುರಾಲೋಚನೆಯಿಂದ ಪ್ರದ್ಯುಮ್ನ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಿರುವುದಾಗಿ ಪ್ರಥಮ ಪಿಯು ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ ಎಂದು ಸಿಬಿಐ ಮಾಹಿತಿ ನೀಡಿದೆ.
ಕೊಲೆ ಆರೋಪದಡಿ ಮಗನ ಬಂಧನವನ್ನು ತಂದೆ ಖಚಿತಪಡಿಸಿದ್ದಾರೆ, ಆದರೆ ಬಂಧಿತ ಆರೋಪಿ ಬಾಲಾಪರಾಧಿಯಾಗಿರುವುದರಿಂದ ಸಿಬಿಐ ಈ ವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.