ಹೈದರಾಬಾದ್: ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಪಕ್ಷದ ನಾಯಕರೊಬ್ಬರನ್ನು ಗುರುವಾರ ಹೈದರಾಬಾದ್ ನಲ್ಲಿ ಹತ್ಯೆ ಮಾಡಲಾಗಿದ್ದು, ಸ್ವಪಕ್ಷೀಯರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಆಂಧ್ರಪ್ರದೇಶ ಮೂಲದ ಟಿಆರ್ ಎಸ್ ನಾಯಕ ವಿ ಶ್ರೀನಿವಾಸ್ ರಾವ್(40) ಅವರ ಮೃತದೇಹ ಇಂದು ಸನಾತನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾಗಿದ್ದು, ಮರದ ಲಾಗ್ ನಿಂದ ಹೊಡೆದು ಬಳಿಕ ತಲೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಪತ್ತೆಯಾದ ಸ್ಥಳದಲ್ಲಿ ನಾಲ್ಕು ಮದ್ಯದ ಬಾಟಲಿಗಳು ಸಿಕ್ಕಿದ್ದು, ಕೃತ್ಯಕ್ಕು ಮುನ್ನ ದುಷ್ಕರ್ಮಿಗಳು ಮೃತ ಶ್ರೀನಿವಾಸ್ ರಾವ್ ಜೊತೆ ಸೇರಿ ಮದ್ಯ ಸೇವಿಸಿರುವ ಸಾಧ್ಯತೆ ಇದೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಿಆರ್ ಎಸ್ ನಾಯಕರಾಗಿದ್ದ ರಾವ್ ಅವರು ಬಲ್ಕಮ್ ಪೇಟ್ ನಲ್ಲಿ ಶೈಕ್ಷಣಿಕ ಕನ್ಸಲ್ಟೆನ್ಸಿಯೊಂದನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಅವರಿಗೆ ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಜೀವ ಬೆದರಿಕೆ ಇತ್ತು. ಅಲ್ಲದೆ ಒಂದು ಬಾರಿ ಶ್ರೀನಿವಾಸ್ ರಾವ್ ಮೇಲೆ ಟಿಆರ್ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.