ಕೈಯಲ್ಲಿ ಬಂದೂಕು ಇದ್ದಿದ್ದರೆ, ನ್ಯಾಯಾಲಯದ ಅಂಗಳದಲ್ಲೇ ಕಸಬ್ ಹತ್ಯೆ ಮಾಡುತ್ತಿದ್ದೆ: 26/11 ಮುಂಬೈ ದಾಳಿ ಸಂತ್ರಸ್ತೆ

ಕೈಯಲ್ಲಿ ಬಂದೂಕು ಇದ್ದಿದ್ದರೆ, ನ್ಯಾಯಾಲಯದ ಅಂಗಳದಲ್ಲೇ ಉಗ್ರ ಕಸಬ್ ನನ್ನು ಗುಂಡಿಟ್ಟು ಹತ್ಯೆ ಮಾಡುತ್ತಿದ್ದೆ ಎಂದು 26/11 ಮುಂಬೈ ದಾಳಿಯಲ್ಲಿ ಬದುಕುಳಿದ ಯುವತಿಯೊಬ್ಹರು ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕೈಯಲ್ಲಿ ಬಂದೂಕು ಇದ್ದಿದ್ದರೆ, ನ್ಯಾಯಾಲಯದ ಅಂಗಳದಲ್ಲೇ ಉಗ್ರ ಕಸಬ್ ನನ್ನು ಗುಂಡಿಟ್ಟು ಹತ್ಯೆ ಮಾಡುತ್ತಿದ್ದೆ ಎಂದು 26/11 ಮುಂಬೈ ದಾಳಿಯಲ್ಲಿ ಬದುಕುಳಿದ ಮಹಿಳೆಯೊಬ್ಬರು ಹೇಳಿದ್ದಾರೆ. 
26/11 ಮುಂಬೈ ಉಗ್ರರ ದಾಳಿ ನಡೆದು ಇಂದಿಗೆ ಒಂಬತ್ತು ವರ್ಷಗಳು ಕಳೆದಿವೆ. ಮುಂಬೈ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದಾಗ ದೇವಿಕಾಗೆ 10 ವರ್ಷವಾಗಿತ್ತು. ಈಗಲೂ ದೇವಿಕಾ ಅವರಿಗೆ ಆ ಕರಾಳ ದಿನದ ಭೀಕರತೆ ನೆನಪಿನಲ್ಲಿವೆ. 
ನ್ಯಾಯಾಲಯದ ಆವರಣದಲ್ಲಿ ಕಸಬ್ ನನ್ನು ನೋಡುತ್ತಿದ್ದಂತೆಯೇ ಕೆಂಡಾಮಂಡಲಗೊಳ್ಳುತ್ತಿದ್ದೆ. ನನ್ನ ಕೈಯಲ್ಲಿ ಬಂದೂಕು ಇದಿದ್ದರೆ, ಕೂಡಲೇ ಆತನನ್ನು ಗುಂಡಿಟ್ಟು ಹತ್ಯೆ ಮಾಡುತ್ತಿದ್ದೆ. ಕಸಬ್ ಒಬ್ಬ ಸೊಳ್ಳೆಯಷ್ಟೇ. ಈತನಿಗಿಂತ ಇರುವ ದೊಡ್ಡ ಉಗ್ರರಿಗೆ ಶೀಘ್ರದಲ್ಲಿಯೇ ಶಿಕ್ಷೆಯಾಗಲಿದೆ ಎಂಬು ವಿಶ್ವಾಸವಿಟ್ಟಿದ್ದೇವೆಂದು ದೇವಿಕಾ ಅವರು ಹೇಳಿದ್ದಾರೆ. 
ನನ್ನ ಕಣ್ಣ ಮುಂದೆಯೇ ದಾಳಿ ನಡೆಯುತ್ತಿದ್ದು. ನಾನು ಸಾಕಷ್ಟು ಭೀತಿಗೊಳಗಾಗಿದ್ದೆ. ಪ್ರತೀಯೊಂದು ಕ್ಷಣ ಈಗಲೂ ನನ್ನ ಕಣ್ಣ ಮುಂದಿವೆ ಎಂದು ತಿಳಿಸಿದ್ದಾರೆ. 
ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಉಗ್ರರು ದೇವಿಕಾ ಅವರ ಕಾಲಿಗೆ ಗುಂಡು ಹಾರಿಸಿದ್ದರು. ಅಜ್ಮಲ್ ಕಸಬ್ ವಿರುದ್ಧ ಸಾಕ್ಷ್ಯಾಧಾರಕ್ಕೆ ದೇವಿಕಾ ಅವರು ಪ್ರಮುಖ ಸಾಕ್ಷ್ಯಾಧಾರವಾಗಿದ್ದರು. ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ದೇವಿಕಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಭದ್ರತಾಪಡೆಗಳಿಂದ ರಕ್ಷಣೆಗೊಳಗಾದ ದೇವಿಕಾ ಅವರು 2 ತಿಂಗಳ ಬಳಿಕ ಚೇತರಿಸಿಕೊಂಡಿದ್ದರು. ಬಳಿಕ ಕಸಬ್ ವಿರುದ್ಧ ಸಾಕ್ಷ್ಯಾಧಾರ ನುಡಿದಿದ್ದರು. 
2008ರಿಂದ ನನ್ನ ಜೀವನದ ಪಯಣ ಅಷ್ಟು ಸುಲಭವಾಗಿಲ್ಲ. ಕಸಬ್ ವಿರುದ್ಧ ಸಾಕ್ಷ್ಯಾಧಾರ ನುಡಿದಿದ್ದಕ್ಕೆ ಜನರು ಕೆಲ ಜನರು ನನ್ನನ್ನು ಶತ್ರು ಎಂಬಂತೆ ನೋಡಿದರು. ಏಕೆಂದರೆ, ಉಗ್ರರು ಎಲ್ಲಿ ನನ್ನಿಂದ ತಮ್ಮ ಮೇಲೂ ದಾಳಿ ನಡೆಸಿಬಿಡುತ್ತಾರೋ ಎಂಬ ಭಯದಲ್ಲಿ ನನ್ನನ್ನು ದೂರವಿಟ್ಟಿದ್ದರು ಎಂದಿದ್ದಾರೆ. 
ಈಗಲೂ ದೇವಿಕಾ ಅವರಿಗೆ ನ್ಯಾಯ ದೊರಕಿದೆ ಎಂಬ ತೃಪ್ತಿ ಸಿಕ್ಕಿಲ್ಲ. ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಹಫೀಜ್ ಸಯೀದ್ ಈಗಲೂ ಪಾಕಿಸ್ತಾನದಲ್ಲಿ ಸ್ವತಂತ್ರ ಪಕ್ಷಿಯಂತೆ ಓಡಾಡಿಕೊಂಡು ಇದ್ದಾನೆ. 
ದೇವಿಕಾ ಅವರ ತಂದೆ ಮಾತನಾಡಿ, ಉಗ್ರರು ಮಗಳ ಮೇಲೆ ದಾಳಿ ನಡೆಸಿದ್ದಾಗ ಆಕೆಗೆ 9 ವರ್ಷ ವಯಸ್ಸಾಗಿತ್ತು. ಮಗಳ ಮೇಲೆ ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ನಾನು ದಿಗ್ಭಾಂತನಾಗಿದ್ದೆ. ಕಸಬ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದರಿಂದ ನಮಗೆ ಸಂತೋಷವಾಗಿದೆ. ಆದರೆ, ದಾಳಿಯ ನಿಜವಾದ ಮಾಸ್ಟರ್ ಮೈಂಡ್ ಗೆ ಶಿಕ್ಷೆಯಾಗದಿರುವುದು ನಮಗೆ ನೋವು ತಂದಿದೆ ಎಂದು ಹೇಳಿದ್ದಾರೆ. 
ದಾಳಿಯ ಮತ್ತೊಬ್ಬ ಪ್ರತ್ಯಕ್ಷದರ್ಶಿಯಾಗಿರುವ ಮೊಹ್ದ್ ತೌಫೀಕ್ ಅವು ಮಾತನಾಡಿ, ದಾಳಿಯ ಕ್ಷಣೆಗಳನ್ನು ನೆನೆದರೆ ಈಗಲೂ ಸಾಕಷ್ಟು ನೋವಾಗುತ್ತದೆ ಎಂದು ಹೇಳಿದ್ದಾರೆ.  ಉಗ್ರರು ದಾಳಿ ನಡೆಸಿದ್ದಾಗ ತೌಫೀಕ್ ಅವರು ಛತ್ರಪತಿ ಶಿವಾಜಿ ಟರ್ಮಿನಲ್ ನಲ್ಲಿ ಟೀ ಮಾರಾಟ ಮಾಡುತ್ತಿದ್ದರು. 
ಘಟನೆ ನೆನೆದರೆ ಸಾಕಷ್ಟು ನೋವಾಗುತ್ತದೆ. ದಾಳಿ ನಡೆದ ಸಂದರ್ಭದಲ್ಲಿ ಸಾಕಷ್ಟು ಜನರನ್ನು ರಕ್ಷಣೆ ಮಾಡಿದ್ದೆ. ವಿನಾಶಕಾರಿ ಪರಿಸ್ಥಿತಿ ಅದಾಗಿತ್ತು. ದಾಳಿ ನಡೆದು ಇಂದಿಗೆ 9 ವರ್ಷಗಳು ಕಳೆದಿವೆ. ಆದರೆ, ಈಗಲೂ ಪಾಕಿಸ್ತಾನದಲ್ಲಿ ಕುಳಿತಿರುವ ಮಾಸ್ಟರ್ ಮೈಂಡ್'ಗೆ ಶಿಕ್ಷೆಯಾಗುವ ಸಲುವಾಗಿ ಕಾಯುತ್ತಿದ್ದೇವೆಂದು ತಿಳಿಸಿದ್ದಾರೆ. 
ದಾಳಿಯಲ್ಲಿ ತಮ್ಮ 6 ಮಂದಿ ಸಂಬಂಧಿಕರನ್ನು ಕಳೆದುಕೊಂದ ಸಂತ್ರಸ್ತ ರಹೀಮ್ ಅನ್ಸಾರಿಯವರು ಮಾತನಾಡಿ, ತಪ್ಪಿಸಿಕೊಳ್ಳಲು ನಮ್ಮ ಸಂಬಂಧಿಕರಿಗೆ ದಾರಿಯೇ ಇರಲಿಲ್ಲ. ದಾಳಿಕೋರನಿಗೆ ಶಿಕ್ಷೆಯಾಗಿದ್ದಕ್ಕೆ ಸಂದತಸವಿದೆ. ಆದರೆ, ಮಾಸ್ಟರ್ ಮೈಂಡ್ ಈಗಲೂ ಪಾಕಿಸ್ತಾನದಲ್ಲಿದ್ದಾನೆ. ಸರ್ಕಾರ ಒಂದು ವೇಳೆ ಆತನನ್ನು ಎಳೆದು ಭಾರತಕ್ಕೆ ತಂದು ಶಿಕ್ಷೆ ನೀಡಿದರೆ, ಅದು ಮಾದರಿಯಾಗಲಿದೆ ಎಂದು ತಿಳಿಸಿದ್ದಾರೆ. 
26/11 ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com