ಮುಂಬೈ: ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ಚಟುವಟಿಕೆ ಕಡಿಮೆಯಾಗಿದೆ ಎಂಬ ಶಿವಸೇನೆ ಪ್ರಶ್ನಿಸಿದೆ. ಕಣಿವೆ ರಾಜ್ಯದಲ್ಲಿ ಯುವಕರಲ್ಲಿ ಭಯ ಹುಟ್ಟಿಸಲು ಉಗ್ರಗಾಮಿಗಳು ಯೋಧರನ್ನು ಸಾಯಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಪ್ರಾಂತೀಯ ಸೇನಾ ಯೋಧ ಇರ್ಫಾನ್ ಅಹ್ಮದ್ ಅವರನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಉಲ್ಲೇಖಿಸಿರುವ ಶಿವಸೇನೆ, ಕಾಶ್ಮೀರಿ ಯುವಕರಲ್ಲಿ ಭಯ ಹುಟ್ಟಿಸಲು ಮತ್ತು ಅವಮಾನ ಮಾಡಲು ಭಯೋತ್ಪಾದಕರು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ ಎಂದಿದೆ.
ಜನಾನರ ಭೀಕರ ಹತ್ಯೆ ಪಾಕಿಸ್ತಾನದ ಯೋಜನೆಯಾಗಿದೆ. ಇವೆಲ್ಲವೂ ಪಾಕಿಸ್ತಾನಿಯರ ಮನದ ಮಾತುಗಳಾಗಿವೆ. ಪ್ರತಿ ತಿಂಗಳು 4ನೇ ಭಾನುವಾರ ಮನ್ ಕಿ ಬಾತ್ ನಡೆಸುವ ವ್ಯಕ್ತಿಗೆ ಇವೆಲ್ಲವೂ ಅರ್ಥವಾಗುವುದಿಲ್ಲವೇ? ಎಂದು ಪ್ರಧಾನಿ ಮೋದಿಯವರ ರೇಡಿಯೋ ಕಾರ್ಯಕ್ರಮವನ್ನು ಪರೋಕ್ಷವಾಗಿ ಶಿವಸೇನೆ ಟೀಕಿಸಿದೆ.
ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿದ್ದ ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ರೂವಾರಿ ಹಫೀಜ್ ಸಯೀದ್ ನ ಬಿಡುಗಡೆ ಗಡಿ ಭಾಗದಲ್ಲಿ ಉಗ್ರಗಾಮಿಗಳ ಚಟುವಟಿಕೆಗೆ ಹೊಸ ಉತ್ಸಾಹವನ್ನು ನೀಡಿದಂತಾಗುತ್ತದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.