ಗೋದ್ರಾ ಹತ್ಯಾಕಾಂಡ ಸಂಬಂಧ ಸೋಮವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ 11 ಮಂದಿ ದೋಷಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಅಲ್ಲದೆ, ಪ್ರಕರಣದಲ್ಲಿ ಇತರೆ 20 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ವಿಚಾರಣೆ ವೇಳೆ ನ್ಯಾಯಮೂರ್ತಿ ಅನಂತ್ ಎಸ್. ದವೆ ಹಾಗೂ ನ್ಯಾಯಮೂರ್ತಿ ಜಿ.ಆರ್. ಉಧ್ವಾನಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದ ರಾಜ್ಯ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಪರಿಸ್ಥಿತಿ ಅವಲೋಕಿಸಿ ಸಂಭವಿಸಬಹುದಾದ ದುರಂತವನ್ನು ಊಹಿಸಲೂ ಸರ್ಕಾರ ವಿಫಲವಾಗಿತ್ತು ಎಂದು ಹೇಳಿದೆ.
ಸಾಬರಮತಿ ಎಕ್ಸೆಪ್ರೆಸ್ ರೈಲಿನ ಬೋಗಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ 59 ಜನರು ಕರಸೇವಕರು ಸಾವನ್ನಪ್ಪಿದ್ದ ಪ್ರಕರಣ ಹಾಗೂ ರೈಲಿನ ಬೋಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು ಎಂಬುದನ್ನು ಉಲ್ಲೇಖಿಸಿರುವ ಪೀಠ, ಪ್ರಯಾಣಿಕರ ಸುರಕ್ಷತೆಗಾಗಿ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸಲು ರೈಲ್ವೆ ಸಚಿವಾಲಯವೂ ವಿಫಲವಾಗಿತ್ತು ಎಂದು ಅಭಿಪ್ರಾಯಪಟ್ಟಿದೆ.
ರೈಲಿನ ಬೋಗಿಯಲ್ಲಿ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟು ಪ್ರಯಾಣಿಕರಿದ್ದುದ್ದರಿಂದ ಹಾಗೂ ಸುಮಾರು 10 ಜನರು ಸುರಕ್ಷಿತವಾಗಿ ಮತ್ತೊಂದು ಕಡೆಯಿಂದ ಕೆಳಗಿಳಿದಿದ್ದರೆಂಬ ಅಂಶದಿಂದ ಆರೋಪಿಗಳು ಸಾವು ನೋವು ಸಂಭವಿಸಬೇಕೆಂಬ ಉದ್ದೇಶವಿದ್ದ ಹೊರತಾಗಿಯೂ ಹೆಚ್ಚು ಜನರು ಸಾಯಬೇಕೆಂಬ ಉದ್ದೇಶ ಅವರಿಗಿರಲಿಲ್ಲ ಎಂದು ಹೇಳಿರುವ ನ್ಯಾಯಾಲಯ ದೋಷಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಸೂಕ್ತ ಎಂದು ತಿಳಿಸಿದೆ.