ದೇಶ
ಜೆಎನ್ ಯು ವಿದ್ಯಾರ್ಥಿ ನಾಪತ್ತೆ ಪ್ರಕರಣದಲ್ಲಿ ಸಿಬಿಐ ತೀವ್ರ ನಿರಾಸಕ್ತಿ ತೋರುತ್ತಿದೆ: ಹೈಕೋರ್ಟ್
ಜವಹರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ ತೀವ್ರ ನಿರಾಸಕ್ತಿ ತೋರುತ್ತಿದೆ...
ನವದೆಹಲಿ: ಜವಹರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ ತೀವ್ರ ನಿರಾಸಕ್ತಿ ತೋರುತ್ತಿದೆ ಎಂದು ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.
ಕಳೆದ ಒಂದು ವರ್ಷದಿಂದ ನಜೀಬ್ ನಾಪತ್ತೆಯಾಗಿದ್ದು, ಆತ ಎಲ್ಲಿದ್ದಾನೆ ಎಂಬ ಬಗ್ಗೆ ಸುಳಿವು ಪತ್ತೆ ಹಚ್ಚಲು ಸಿಬಿಐ ಶಕ್ತವಾಗಿಲ್ಲ, ಪ್ರಕರಣದ ಬಗ್ಗೆ ಸಿಬಿಐ ಆಸಕ್ತಿ ತೋರುತ್ತಿಲ್ಲ, ಕಾಗದದ ಮೇಲೆ ಯಾವುದೇ ಫಲಿತಾಂಶವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಮೊದಲಿಗೆ ಪ್ರಕರಣವನ್ನು ದೆಹಲಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದರು, ಆದರೆ ದೆಹಲಿ ಪೊಲೀಸರ ತನಿಖೆಯಿಂದ ತೃಪ್ತವಾಗದ ಹಿನ್ನೆಲೆಯಲ್ಲಿ ಮೇ 16 ರಂದು ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.
ದೆಹಲಿ ಪೊಲೀಸರಿಂದ ಪ್ರಕರಣವನ್ನು ಪಡೆದ ಸಿಬಿಐ ತನಿಖೆಯಿಂದ ಯಾವುದೇ ಪ್ರಗತಿ ಕಂಡಿಲ್ಲ, ಪ್ರಕರಣ ಎಲ್ಲಿತ್ತೋ ಇನ್ನೂ ಅದೇ ಹಂತದಲ್ಲಿದೆ. ಅಕ್ಟೋಬರ್ 15, 2016 ರಂದು ಮಹಿ ಮಾಂಡೋವಿ ಹಾಸ್ಟೆಲ್ ನಿಂದ 27 ವರ್ಷದ ಎಂಎಸ್ಸಿ ಬಯೋ ಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಕಾಣೆಯಾಗಿದ್ದ. ಅತನನ್ನು ಪತ್ತೆ ಹಚ್ಚಲು ನಜೀಬ್ ಕುಟುಂಬಸ್ಥರು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.