ಲಖನೌ: ತಾಜ್ ಮಹಲ್ ಮೂಲತಃ ಹಿಂದೂ ದೇಗುಲವಾಗಿದ್ದು. ಈ ಹಿಂದೆ ಅದನ್ನು ತೇಜೋ ಮಹಲ್ ಎಂದು ಕರೆಯಲಾಗುತ್ತಿತ್ತು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು ಹೇಳಿದ್ದಾರೆ.
ತಾಜ್ ಮಹಲ್ ವಿವಾದ ಕುರಿತಂತೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾಜ್ ಮಹಲ್ ಮೂಲತಃ ಹಿಂದೂ ದೇಗುಲವಾಗಿದ್ದು, ಅದನ್ನು ತೇಜೋ ಮಹಲ್ ಎಂದು ಕರೆಯಲಾಗುತ್ತಿತ್ತು. ದೇಗುಲವನ್ನು ಧ್ವಂಸಗೊಳಿಸಿ ಶಹಜಹಾನ್ ತಾಜ್ ಮಹಲ್'ನ್ನು ಕಟ್ಟಿಸಿದ್ದ ಎಂದು ಹೇಳಿದ್ದಾರೆ.
ಕೇವಲ ಸಮಾಧಿ ಮಾತ್ರವೇ ಆಗಿದ್ದರೆ ತಾಜ್ ಮಹಲ್ ನಲ್ಲೇಕೆ ಅಷ್ಟೊಂದು ಕೊಠಡಿಗಳಿವೆ? ತಾಜ್ ಮಹಲ್ ನ್ನು ಧ್ವಂಸಗೊಳಿಸುವ ಅಗತ್ಯವಿಲ್ಲ. ತಾಜ್ ಮಹಲ್ ಹೆಸರನ್ನು ತೇಜೋ ಮಹಲ್ ಎಂದು ಬದಲಿಸಬೇಕು...ಬ್ರಿಟೀಷರು ನಮ್ಮ ದೇಗುಲಗಳನ್ನು ಧ್ವಂಸಗೊಳಿಸಲಿಲ್ಲ. ಮೊಘಲರು ಧ್ವಂಸಗೊಳಿಸಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾಜ್ ಮಹಲ್ ಒಳ ಹೋಗಿ ಅಲ್ಲಿರುವ ಹಿಂದು ಚಿಹ್ನೆಗಳನ್ನು ನೋಡಬೇಕಿದೆ ಎಂದು ತಿಳಿಸಿದ್ದಾರೆ.
ಉತ್ತರಪ್ರದೇಶ ಸರ್ಕಾರ ಇತ್ತೀಚೆಗಷ್ಟೇ ತನ್ನ ರಾಜ್ಯ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ನ್ನು ಕೈಬಿಟ್ಟಿತ್ತು. ಇದರ ಪರಿಣಾಮ ಇದೀಗ ಭಾರೀ ಟೀಕೆ, ವಿವಾದಗಳು ಸೃಷ್ಟಿಯಾಗತೊಡಗಿದೆ.
ತಾಜ್ ಮಹಲ್ ಕುರಿತಂತೆ ಪರ ಹಾಗೂ ವಿರೋಧಗಳ ಟೀಕೆಗಳು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ರಾಜಕೀಯ ಕೆಸರೆರಚಾಟಗಳು ಆರಂಭಗೊಂಡಿವೆ.
ಈ ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು, ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳು. ಹೀಗಾಗಿ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನವಿಲ್ಲ. ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ ಎಂದು ಹೇಳಿದ್ದರು.