ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ರವಾಹದ ಬಳಿಕ ಕೇದಾರನಾಥ ಕ್ಷೇತ್ರ ಪುನರ್ ನಿರ್ಮಾಣಕ್ಕೆ ಮೋದಿ ಮುಂದಾಗಿದ್ದರು: ವಿಜಯ್ ಬಹುಗುಣ

2013ರ ಭೀಕರ ಪ್ರವಾಹದ ಬಳಿಕ ಅಸ್ಚವ್ಯಸ್ಥಗೊಂಡಿದ್ದ ಕೇದಾರನಾಥ ತೀರ್ಥಕ್ಷೇತ್ರ ಅಭಿವೃದ್ಧಿಗೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮುಂದಾಗಿದ್ದರು ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಒಪ್ಪಿಕೊಂಡಿದ್ದಾರೆ.
Published on
ನವದೆಹಲಿ: 2013ರ ಭೀಕರ ಪ್ರವಾಹದ ಬಳಿಕ ಅಸ್ಚವ್ಯಸ್ಥಗೊಂಡಿದ್ದ ಕೇದಾರನಾಥ ತೀರ್ಥಕ್ಷೇತ್ರ ಅಭಿವೃದ್ಧಿಗೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮುಂದಾಗಿದ್ದರು ಎಂದು ಉತ್ತರಾಖಂಡ ಮಾಜಿ  ಮುಖ್ಯಮಂತ್ರಿ ವಿಜಯ್ ಬಹುಗುಣ ಒಪ್ಪಿಕೊಂಡಿದ್ದಾರೆ.
ನಿನ್ನೆ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಪ್ರವಾಹದ ಸಂದರ್ಭವನ್ನು ನೆನೆಯುತ್ತಾ, "2013ರ ಪ್ರವಾಹಕ್ಕೆ ಸಾವಿರಾರು ಜನರು ಬಲಿಯಾಗಿದ್ದರು. ಮೂಲಸೌಕರ್ಯಗಳೆಲ್ಲ ಕೊಚ್ಚಿ ಹೋಗಿದ್ದವು. ನಾಶವಾದ  ಮೂಲಸೌಕರ್ಯಗಳನ್ನು ಮರು ನಿರ್ಮಾಣ ಮಾಡುವುದಾಗಿ ನಾನು ಹೇಳಿದ್ದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಒತ್ತಡದಿಂದಾಗಿ ವಿಜಯ್ ಬಹುಗುಣ ಇದಕ್ಕೆ ಒಪ್ಪಿರಲಿಲ್ಲ ಎಂದು ಹೇಳಿದ್ದರು. ಇದೀಗ ಈ ಮಾತನ್ನು ಸ್ವತಃ  ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಒಪ್ಪಿಕೊಂಡಿದ್ದು, ಹೌದು ಅಂದು ಪ್ರಧಾನಿ ಮೋದಿ ಕೇದಾರನಾಥ ತೀರ್ಥ ಕ್ಷೇತ್ರ ಅಭಿವೃದ್ಧಿಗೆ ಮುಂದಾಗಿದ್ದರು ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ವಿಜಯ್ ಬಹುಗುಣ ಅವರು, ಹೌದು.. ಅಂದು ಪ್ರವಾಹದ ಬಳಿಕ ಅಸ್ತವ್ಯಸ್ಥಗೊಂಡಿದ್ದ ಕೇದಾರನಾಥ ತೀರ್ಥ ಕ್ಷೇತ್ರ ಅಭಿವೃದ್ಧಿಗೆ ಪ್ರಧಾನಿ ಮೋದಿ ಮುಂದಾಗಿದ್ದರು. ಅಂದು ನನ್ನ ನಿವಾಸಕ್ಕೆ  ಆಗಮಿಸಿದ್ದ ಅವರು 5 ಕೋಟಿ ರು.ಗಳ ಚೆಕ್ ಅನ್ನು ನೀಡಿದ್ದರು. ಅಲ್ಲದೆ ಮೂಲ ಸೌಕರ್ಯ ಅಭಿವೃದ್ಧಿಗೆ ನೆರವಾಗುವ ಕುರಿತು ವಿಶ್ವಾಸ ನೀಡಿದ್ದರು. ಮೋದಿ ಅವರ ಯೋಜನೆಯ ಪ್ರಸ್ತಾವನೆ ಸಂಬಂಧಿಸಿದಂತೆ ನಾನು ಕೂಡ ಅಂದು  ನೋಡೋಣ ಎಂದು ಹೇಳಿದ್ದೆ. ಆದರೆ ಬಳಿಕ ಕೆಲವು ಹೇಳಲಾಗದ ಪರಿಸ್ಥಿತಿಗಳು ಬಂದಿದ್ದರಿಂದ ಮೋದಿ ಅವರ ನೆರವನ್ನು ಬೇಡ ಎಂದುಕೊಂಡು ಸರ್ಕಾರದ ವತಿಯಿಂದಲೇ ಮೂಲಸೌಕರ್ಯ ಕಾಮಗಾರಿ ಆರಂಭಿಸಿದೆವು ಎಂದು  ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಹೇಳಿಕೆ ನೀಡಿದ್ದ ಮತ್ತೋರ್ವ ಮಾಜಿ ಸಿಎಂ ಹರೀಶ್ ರಾವತ್ ಅವರು, ಪ್ರವಾಹದ ಸಂದರ್ಭದಲ್ಲಿ ಪ್ರಧಾನಿ ಮೋದಿ ಯಾವುದೇ ರೀತಿಯ ನೆರವು ನೀಡಿರಲಿಲ್ಲ. ರಕ್ಷಣಾ  ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿಲ್ಲ. ಪ್ರಸ್ತುತ ವಿವಾದವೇನಿದ್ದರೂ ಪ್ರಧಾನಿ ಮೋದಿ ಹಾಗೂ ವಿಜಯ್ ಬಹುಗುಣ ಅವರ ನಡುವಿನದ್ದಾಗಿದ್ದು, ಇದು ಬಿಜೆಪಿ ವಿಚಾರ ಮಾತ್ರ ಎಂದು ಹೇಳಿದ್ದರು. ಇನ್ನು ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೂಡ  ಪ್ರತಿಕ್ರಿಯಿಸಿದ್ದು, ಮುಂಬುರವ ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಪ್ರಧಾನಿ ಮೋದಿ ಇಂತಹ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com