ದೇಶ
ಇದು 2017ನೇ ಇಸವಿ, 1817 ಅಲ್ಲ: ವಸುಂದರಾ ರಾಜೇ ವಿರುದ್ಧ ಹರಿಹಾಯ್ದ ರಾಹುಲ್
ಭ್ರಷ್ಟ ಅಧಿಕಾರಿಗಳ ಕುರಿತು ಮಾಡುವ ಮಾಧ್ಯಗಳಿಗೆ ಶಿಕ್ಷೆ ವಿಧಿಸುವ ರಾಜಸ್ತಾನ ಸರ್ಕಾರದ ವಿವಾದಿತ ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ...
ನವದೆಹಲಿ: ಭ್ರಷ್ಟ ಅಧಿಕಾರಿಗಳ ಕುರಿತು ಮಾಡುವ ಮಾಧ್ಯಗಳಿಗೆ ಶಿಕ್ಷೆ ವಿಧಿಸುವ ರಾಜಸ್ತಾನ ಸರ್ಕಾರದ ವಿವಾದಿತ ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಅವರು, ರಾಜಸ್ತಾನ ಮುಖ್ಯಮಂತ್ರಿಗಳೇ, ನಾವು 21ನೇ ಶತಮಾನದಲ್ಲಿದ್ದೇವೆ ಎಂದು ಅತ್ಯಂತ ವಿನಮ್ರವಾಗಿ ಹೇಳುತ್ತೇನೆ. ಇದು 2017ನೇ ಇಸವಿಯೇ ಹೊರತು 1817 ಅಲ್ಲ ಎಂದು ವಸುಂದರಾ ರಾಜೇ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಸುಗ್ರೀವಾಜ್ಞೆ ವಾಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂಬ ಕಾನೂನು ತಜ್ಞರ ಅಭಿಪ್ರಾಯವುಳ್ಳ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಜಸ್ತಾನ ಸರ್ಕಾರ ವಿವಾದಿತ ಸುಗ್ರೀವಾಜ್ಞೆಯೊಂದರನ್ನು ಹೊರಡಿಸಿತ್ತು. ಭ್ರಷ್ಟಾಚಾರಿಗಳ ರಕ್ಷಣೆಗೆ ಮುಂದಾಗಿದ್ದ ರಾಜಸ್ತಾನದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ, ನಿವೃತ್ತ ಹಾಗೂ ಹಾಲಿ ನ್ಯಾಯಾಧೀಶರ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಪಡೆಯದೇ ಮಾಧ್ಯಮಗಳು ಯಾವುದೇ ವರದಿ ಪ್ರಕಟಿಸದಂತೆ ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಸುಗ್ರೀವಾಜ್ಞೆ ಸಾಕಷ್ಟು ವಿರೋಧ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.