ನವದೆಹಲಿ: ಇಟಲಿಯ ಮಿಲನ್ ನಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳು ಜನಾಂಗೀಯ ದಾಳಿಗೆ ಒಳಗಾಗಿರುವ ಬಗ್ಗೆ ಭಾರತೀಯ ದೂತವಾಸ ಕಚೇರಿ ಎಚ್ಚೆತ್ತುಕೊಂಡಿದ್ದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳ ಸಹಾಯಕ್ಕೆ ಮುಂದಾಗಿದೆ.
ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ತಾವು ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ಮಿಲನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ಕುರಿತು ವಿಸ್ತೃತ ವರದಿ ನನಗೆ ಸಿಕ್ಕಿದೆ. ದಯಮಾಡಿ ಗಾಬರಿಯಾಗಬೇಡಿ. ನಾನು ವೈಯಕ್ತಿಕವಾಗಿ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ವಿದ್ಯಾರ್ಥಿಗಳು ಗಾಬರಿಗೊಳಗಾಗಬಾರದು ಎಂದು ಒತ್ತಾಯಿಸಿದ ಮಿಲನ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಹೇಳಿಕೆ ಹೊರಡಿಸಿದ್ದು, ಮಿಲನ್ ನಲ್ಲಿರುವ ಅತಿ ಉನ್ನತ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿದೆ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಕೋರಲಾಗಿದೆ ಎಂದು ಹೇಳಿದೆ.
ಸಮಸ್ಯೆಗೀಡಾದ ವಿದ್ಯಾರ್ಥಿಗಳು ಪರಸ್ಪರ ಸಂಪರ್ಕದಲ್ಲಿರುವಂತೆ ಮತ್ತು ಭಾರತೀಯ ದೂತಾವಾಸ ಕಚೇರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಜನಾಂಗೀಯ ಹಲ್ಲೆ ನಡೆದ ಸ್ಥಳವನ್ನು ಗುರುತಿಸಿ ಹೇಳುವಂತೆ ಸೂಚಿಸಲಾಗಿದೆ.