ದೇಶ
ಹಳಿ ತಪ್ಪಿದ ದೆಹಲಿ-ರಾಂಚಿ ರಾಜಧಾನಿ ಎಕ್ಸ್ ಪ್ರೆಸ್ ರೈಲು, ಒಂದೇ ದಿನ ಎರಡು ಅವಘಡ
ರೈಲ್ವೆ ಸಚಿವರು ಬದಲಾದರೂ ದೇಶದಲ್ಲಿ ನಡೆಯುತ್ತಿರುವ ರೈಲು ಅವಘಡಗಳ ಸಂಖ್ಯೆ ಮಾತ್ರ ಕಡಿಯಾಗುತ್ತಿಲ್ಲ. ದೆಹಲಿಯ ಮಿಂಟೊ....
ನವದೆಹಲಿ: ರೈಲ್ವೆ ಸಚಿವರು ಬದಲಾದರೂ ದೇಶದಲ್ಲಿ ನಡೆಯುತ್ತಿರುವ ರೈಲು ಅವಘಡಗಳ ಸಂಖ್ಯೆ ಮಾತ್ರ ಕಡಿಯಾಗುತ್ತಿಲ್ಲ. ದೆಹಲಿಯ ಮಿಂಟೊ ಸೇತುವೆ ಬಳಿ ದೆಹಲಿ-ರಾಂಚಿ ರಾಜಧಾನಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಗುರುವಾರ ನಡೆದಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೆ ಉತ್ತರಪ್ರದೇಶದ ಸೋನ್ಭದ್ರಾದ ಓಬ್ರಾ ಬಳಿ ಹೌರಾ -ಜಬಲ್ಪುರ್ ನಡುವೆ ಸಂಚರಿಸುವ ಶಕ್ತಿಕುಂಜ್ ಎಕ್ಸ್ಪ್ರೆಸ್ ರೈಲಿನ 7 ಬೋಗಿಗಳು ಹಳಿ ತಪ್ಪಿದ್ದವು. ಇದರೆ ಬೆನ್ನಲ್ಲೇ ಈಗ ದೆಹಲಿಯಲ್ಲಿ ಮತ್ತೊಂದು ರೈಲು ಹಳ್ಳಿ ತಪ್ಪಿದ್ದು, ಅದೃಷ್ಟವಶಾತ್ ಈ ಎರಡು ಅಪಘಾತಗಳಲ್ಲೂ ಯಾವುದೇ ಸಾವು ನೋವು ಸಂಭವಿಸಿಲ್ಲ.
ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ವೇಗ ಅತಿ ಕಡಿಮೆ ಇದ್ದುದ್ದರಿಂದ ಕೇವಲ ಎಂಜಿನ್ ಮತ್ತು ಪವರ್ ಬೋಗಿಗೆ ಧಕ್ಕೆಯಾಗಿದೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಉತ್ತರ ರೈಲ್ವೆ ವಕ್ತಾರ ನೀರಜ್ ಶರ್ಮಾ ಅವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 11.45ರ ಸುಮಾರಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಬೆಳಗಿನ ಜಾವ 6.30ರ ಸುಮಾರಿಗೆ ಶಕ್ತಿಕುಂಜ್ ಎಕ್ಸ್ಪ್ರೆಸ್ ಹಳಿ ತಪ್ಪಿತ್ತು.
ಕಳೆದ 20 ದಿನಗಳಲ್ಲಿ ದೇಶದಲ್ಲಿ ಐದು ರೈಲು ಅವಘಡ ಸಂಭವಿಸಿದ್ದು, ಪಿಯೂಷ್ ಗೋಯಲ್ ಅವರು ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಾರದ ಒಳಗೆ ಒಂದೇ ದಿನ ಎರಡು ರೈಲುಗಳು ಹಳಿ ತಪ್ಪಿರುವುದು ನೂತನ ಸಚಿವರನ್ನು ಚಿಂತೆಗೀಡುಮಾಡಿದೆ. ನಿರಂತರ ರೈಲು ಅವಘಡವಾದ ಹಿನ್ನಲೆಯಲ್ಲಿ ರೈಲ್ವೆ ಖಾತೆಯನ್ನು ಸುರೇಶ್ ಪ್ರಭು ಅವರಿಂದ ಬದಲಾವಣೆ ಮಾಡಲಾಗಿದೆ.