ದೇಶ
ಡೇರಾ ಸಚ್ಚಾ ಸೌಧ ಆಶ್ರಮಕ್ಕೆ ಸೇನೆ, ಪೊಲೀಸರ ಪ್ರವೇಶ, ಶೋಧ ಕಾರ್ಯಕ್ಕೆ ಚಾಲನೆ
ಅತ್ಯಾಚಾರ ಅಪರಾಧದಡಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್ ರಹೀಮ್ ಆಶ್ರಮಕ್ಕೆ ಪೊಲೀಸರು ಮತ್ತು ಸೇನಾಪಡೆಗಳು ಪ್ರವೇಶ ಮಾಡಿದ್ದು, ಹೈಕೋರ್ಟ್ ಆದೇಶದಂತೆ ಆಶ್ರಮದಲ್ಲಿ ಶೋಧಕಾರ್ಯಕ್ಕೆ ಮುಂದಾಗಿವೆ.
ಚಂಡೀಘಡ: ಅತ್ಯಾಚಾರ ಅಪರಾಧದಡಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್ ರಹೀಮ್ ಆಶ್ರಮಕ್ಕೆ ಪೊಲೀಸರು ಮತ್ತು ಸೇನಾಪಡೆಗಳು ಪ್ರವೇಶ ಮಾಡಿದ್ದು, ಹೈಕೋರ್ಟ್ ಆದೇಶದಂತೆ ಆಶ್ರಮದಲ್ಲಿ ಶೋಧಕಾರ್ಯಕ್ಕೆ ಮುಂದಾಗಿವೆ.
ಈಗಾಗಲೇ ಸೇನಾಪಡೆಯ ಹಲವು ತುಕಡಿಗಳು ಹಾಗೂ ಪೊಲೀಸ್ ಪಡೆ ಸಿರ್ಸಾ ಆಶ್ರಮ ಪ್ರವೇಶ ಮಾಡಿದ್ದು, ಪೊಲೀಸರಿಗೆ ಸೈನಿಕರು ಸಾಥ್ ನೀಡಿದ್ದಾರೆ. ಇದಲ್ಲದೇ ಆಶ್ರಮಕ್ಕೆ ಬಾಂಬ್ ನಿಷ್ಕ್ರಿಯ ದಳಗಳು ಹಾಗೂ ಶ್ವಾನದಳಗಳೂ ಕೂಡ ಪ್ರವೇಶ ಮಾಡಿವೆ ಎಂದು ತಿಳಿದುಬಂದಿದೆ. ಇನ್ನು ಆಶ್ರಮದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಡೇರಾ ಸಚ್ಚಾ ಆಶ್ರಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಆಶ್ರಮ ಪ್ರವೇಶಿಸುವ ಭಕ್ತರನ್ನು ತೀವ್ರ ಶೋಧಕ್ಕೆ ಒಳಪಡಿಸಲಾಗುತ್ತಿದೆ.
ಸಿರ್ಸಾದ ಡೇರಾ ಸಚ್ಚಾ ಆಶ್ರಮದ ಸುತ್ತಮುತ್ತಲ ಪ್ರದೇಶದಲ್ಲಿ ಕರ್ಫ್ಯೂ ಜಾರಿ
ಇನ್ನು ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಡೇರಾ ಸಚ್ಚಾ ಆಶ್ರಮದ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹರ್ಯಾಣದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಸತೀಶ್ ಮೆಹ್ರಾ ಅವರು ಆಯುಕ್ತ ಎಕೆಎಸ್ ಪವಾರ್ ಅವರು ಡೇರಾ ಸಚ್ಚಾ ಆಶ್ರಮದಲ್ಲಿ ಶೋಧಕಾರ್ಯದ ಮೇಲ್ವಿಚಾರಕಣೆ ನಡೆಸಿದ್ದಾರೆ. ಪ್ರಸ್ತುತ ಡೇರಾ ಆಶ್ರಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಹೇಳಿದರು.