ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ದೇಶ
ಯುದ್ಧ ಸಾಮಾಗ್ರಿ ಕೊರತೆ ಕುರಿತ ಸಿಎಜಿ ವರದಿ ತಪ್ಪು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಯುದ್ಧ ಆರಂಭವಾದರೆ 20 ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿಯಾಗುತ್ತದೆ ಎಂಬ ಮಹಾಲೇಖಪಾಲ (ಸಿಎಜಿ) ವರದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ತಳ್ಳಿಹಾಕಿದ್ದಾರೆ...
ಬಾರ್ಮರ್: ಯುದ್ಧ ಆರಂಭವಾದರೆ 20 ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿಯಾಗುತ್ತದೆ ಎಂಬ ಮಹಾಲೇಖಪಾಲ (ಸಿಎಜಿ) ವರದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ತಳ್ಳಿಹಾಕಿದ್ದಾರೆ.
ಸಿಎಜಿ ವರದಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಯುದ್ಧ ಸಾಮಾಗ್ರಿಗಳ ಕುರಿತಂತೆ ಸಿಎಜಿ ವರದಿ ತಪ್ಪು. ಈ ವಿಚಾರದ ಬಗ್ಗೆ ಚರ್ಚೆ ನಡೆಸುವುದು ಅನಗತ್ಯ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸಿದ್ದೇನೆ. ಶಸ್ತ್ರಾಸ್ತ್ರಗಳ ಖರೀದಿ ಸುದೀರ್ಘ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಭಾರತೀಯ ಸೇನೆಯ ಬಳಿಯಿರುವ ಶಸ್ತ್ರಾಸ್ತ್ರಗಳ ಬಗ್ಗೆ ಲೆಕ್ಕ ಪರಿಶೋಧನಾ ಸಮತಿ (ಸಿಎಜಿ) ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿತ್ತು. ವರದಿಯಲ್ಲಿ ಯುದ್ಧ ನಡೆದರೆ ಭಾರತೀಯ ಸೇನೆಗೆ 152 ವಿಧದ ಶಸ್ತ್ರಾಸ್ತ್ರಗಳು ತುರ್ತಾಗಿ ಬೇಕಾಗುತ್ತದೆ. ಆದರೆ ಈ ಪೈಕಿ 61 ವಿಧದ ಶಸ್ತ್ರಾಸ್ತ್ರಗಳು ಸತತ 20 ದಿನ ಯುದ್ಧ ನಡೆದರೆ ಖಾಲಿಯಾಗುತ್ತವೆ. 31 ವಿಧದ ಶಸ್ತ್ರಾಸ್ತ್ರಗಳ ದಾಸ್ತಾನು ತೃಪ್ತಿದಾಯಕವಾಗಿದೆಯಾದರೂ ಉಳಿದ 60 ವಿಧದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆ ಪ್ರಮಾಣದಲ್ಲಿವೆ ಎಂದು ವರದಿಯಲ್ಲಿ ತಿಳಿಸಿತ್ತು.
ಯಾವುದೇ ಸಂದರ್ಭದಲ್ಲಿ ಯುದ್ಧ ಘೋಷಣೆಯಾದರೆ ಕನಿಷ್ಠ 40 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರಗಳ ಸಂಗ್ರಹ ಆ ದೇಶದಲ್ಲಿ ಇರಬೇಕು ಎಂಬ ನಿಯಮವಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ