ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
ದೇಶ
ಗೋವಾದಲ್ಲಿ ಇನ್ನು ಮುಂದೆ ಪ್ರವಾಸಿಗರು ಮುಕ್ತ ಪ್ರದೇಶದಲ್ಲಿ ಅಡುಗೆ ಮಾಡುವಂತಿಲ್ಲ: ಸಿಎಂ ಆದೇಶ
ಸೂರ್ಯಾಸ್ತಮಾನವಾದ ನಂತರ ಗೋವಾ ಬೀಚ್ ನಲ್ಲಿ ಈಜುವುದನ್ನು ನಿಷೇಧಿಸಿದ ನಂತರ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್....
ಪಣಜಿ: ಸೂರ್ಯಾಸ್ತವಾದ ನಂತರ ಗೋವಾ ಬೀಚ್ ನಲ್ಲಿ ಈಜುವುದನ್ನು ನಿಷೇಧಿಸಿದ ನಂತರ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇದೀಗ ಪ್ರವಾಸಿಗರು ರಾಜ್ಯದಲ್ಲಿ ಮುಕ್ತ ಪ್ರದೇಶಗಳಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಪ್ರವಾಸೋದ್ಯಮ ಪಾಲುದಾರರ ಸಭೆ ನಡೆಯಿತು. ಪ್ರವಾಸಿಗರ ಗುಂಪು ಸಾರ್ವಜನಿಕ ಸ್ಥಳಗಳಲ್ಲಿ ಅಡುಗೆ ಮಾಡುವುದು ಅಶುಚಿಯಾಗುವುದಲ್ಲದೆ, ಎಲ್ಲೆಂದರಲ್ಲಿ ಕಸ,ಕಡ್ಡಿ ಪದಾರ್ಥಗಳನ್ನು ಎಸೆದು ಪರಿಸರವನ್ನು ಹಾಳು ಮಾಡಲಾಗುತ್ತದೆ. ಹೀಗಾಗಿ ಇದಕ್ಕೆ ನಿಷೇಧ ಹೇರುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ರಾಜ್ಯ ಪ್ರವಾಸೋದ್ಯಮ ಸಚಿವ ಮನೋಹರ್ ಅಜಗೌಂಕರ್, ಪ್ರವಾಸಿಗರು ಸೂರ್ಯಾಸ್ತದ ನಂತರ ಸಮುದ್ರದಲ್ಲಿ ಈಜಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಲು ಸಾಮೂಹಿಕ ಅರಿವು ಮೂಡಿಸುವ ಅಭಿಯಾನ ಕೈಗೊಳ್ಳುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಕ್ತ ಪ್ರದೇಶದಲ್ಲಿ ಪ್ರವಾಸಿಗರು ಅಡುಗೆ ಮಾಡುವುದು ಒಳ್ಳೆಯದಲ್ಲ. ಇದು ಸುತ್ತಮುತ್ತಲ ಜನರಿಗೆ ತೊಂದರೆಯುಂಟುಮಾಡುವುದಲ್ಲದೆ ಹಾಗೆಯೇ ಕಸ-ಕಡ್ಡಿಗಳನ್ನು ಎಸೆದು ಹೋಗುತ್ತಾರೆ. ಬಸ್ಸುಗಳಲ್ಲಿ ಪ್ರಯಾಣಿಸಿ ಬಂದು ಮುಕ್ತ ಪ್ರದೇಶದಲ್ಲಿ ಅಡುಗೆ ಮಾಡಿ ಊಟ ಮಾಡಿ ವಸ್ತುಗಳನ್ನೆಲ್ಲಾ ಎಸೆದು ಪರಿಸರ ನಾಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ