ಹೈದರಾಬಾದ್: ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದ 10 ವರ್ಷದ ಮಗನೊಂದಿಗೆ ಹೆತ್ತ ತಾಯಿ ರಾತ್ರಿಯಿಡೀ ಮಳೆಯಲ್ಲಿ ಮನೆಯ ಹೊರಗೆ ಕಾದಿರುವ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದ ಕುಕಟ್ಪಲ್ಲಿಯ ವೆಂಕಟೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಈಶ್ವರಮ್ಮ ಎಂಬುವರ 10 ವರ್ಷದ ಮಗ ಸಾವನ್ನಪ್ಪಿದ್ದಾನೆ.
ಮಗನ ಶವವನ್ನು ತೆಗೆದುಕೊಂಡು ತಾಯಿ ವಾಸವಾಗಿದ್ದ ಬಾಡಿಗೆ ಮನೆಗೆ ಆಗಮಿಸಿದ್ದಾಳೆ. ಆ ವೇಳೆ ಮನೆ ಮಾಲೀಕ ನಿವಾಸದೊಳಗೆ ಹೋಗದಂತೆ ತಡೆ ಹಿಡಿದಿದ್ದಾನೆ. ಆಕೆ ಆತನ ಮುಂದೆ ಕೇಳಿಕೊಂಡರು ಬೀಗ ತೆಗೆದಿಲ್ಲ.
ಶವವನ್ನು ಮನೆಯೊಳಗೆ ಕರೆದುಕೊಂಡು ಹೋದರೆ ಅಶುಭವಾಗುತ್ತದೆ ಎಂದು ಕ್ಯಾತೆ ತೆಗೆದಿದ್ದಾನೆ. ಹೀಗಾಗಿ ರಾತ್ರಿಯಿಡಿ ಮೃತ ಮಗನ ಶವದೊಂದಿಗೆ ಮಳೆಯಲ್ಲಿ ಕಳೆದಿದ್ದಾಳೆ. ಇದನ್ನು ನೋಡಿರುವ ಸ್ಥಳೀಯರು ಸಹಾಯ ಮಾಡಿ ಮೃತ ದೇಹವನ್ನು ಪ್ಲಾಸ್ಟಿಕ್ ಕವರ್ನಿಂದ ಮುಚ್ಚಿದ್ದಾರೆ. ಆದರೆ ಯಾರೋಬ್ಬರು ಮಹಿಳೆಗೆ ಸ್ಥಳ ನೀಡಿಲ್ಲ.
ಇನ್ನು ಈ ಸಂಬಂಧ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಅಚೂತ್ ರಾವ್ ಈ ಹೀನ ಕೃತ್ಯದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದು ತೀವ್ರವಾದ ಮಾನವ ಹಕ್ಕು ಉಲ್ಲಂಘನೆ ಪ್ರಕರಣವಾಗಿದ್ದು, ಈ ಸಂಬಂಧ ಮೃತ ಬಾಲಕನ ತಾಯಿ ದೂರು ದಾಖಲಿಸಬೇಕೆಂದು ಹೇಳಿದ್ದಾರೆ.
ಯಾರು ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೋ, ಅವರಿಗೆ ಎಲ್ಲಾ ರೀತಿಯ ಹಕ್ಕುಗಳಿರುತ್ತವೆ, ಅದನ್ನು ಯಾರಿಂದಲೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.