ಗುರ್ಮಿತ್ ವಿರುದ್ಧದ ಕೊಲೆ ಪ್ರಕರಣದ ವಿಚಾರಣೆ ಆರಂಭ: ಪಂಚಕುಲದಲ್ಲಿ ಹೆಚ್ಚಿದ ಭದ್ರತೆ

ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗ ಬಳಿಕ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ 2 ಕೊಲೆ ಪ್ರಕರಣಗಳ ವಿಚಾರಣೆ ಶನಿವಾರ ಪಂಚಕುಲ ನ್ಯಾಯಾಲಯದಲ್ಲಿ...
ಪಂಚಕುಲದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿರುವುದು
ಪಂಚಕುಲದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿರುವುದು

ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗ ಬಳಿಕ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ 2 ಕೊಲೆ ಪ್ರಕರಣಗಳ ವಿಚಾರಣೆ ಶನಿವಾರ ಪಂಚಕುಲ ನ್ಯಾಯಾಲಯದಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪಂಚಕುಲದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. 

2 ಅತ್ಯಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಗುರ್ಮಿತ್ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಪ್ರಸ್ತುತ ಗುರ್ಮಿತ್ ಜೈಲುವಾಸದಲ್ಲಿದ್ದು, ಆತನ ವಿರುದ್ಧವಿರುವ ಎರಡು ಕೊಲೆ ಪ್ರಕರಣ ಕುರಿತಂತೆ ಸಿಬಿಐ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದೆ. ಈ ಹಿನ್ನಲೆಯಲ್ಲಿ ಪಂಚಕುಲ ಪಟ್ಟಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ. 

ಪಂಚಕುಲ ನ್ಯಾಯಾಲಯದ ಆವರಣದ ಒಳಗೆ ಹಾಗೂ ಹೊರಗೆ, ಪಟ್ಟಣದ ಹಲವೆಡೆ ಅರೆ ಸೇನೆ ಮತ್ತು ಪೊಲೀಸ್ ಪಡೆಯ ಸಿಬ್ಬಂದಿಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಈ ಹಿಂದಿನಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿಸಿದ್ದಾರೆ. 

ಗುರ್ಮಿತ್ ವಿರುದ್ಧ ಕೊಲೆ ಪ್ರಕರಣಗಳ ವಿಚಾರಣೆ ಆರಂಭಕ್ಕೂ ಮುನ್ನವೇ ಈಗಾಗಲೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅರೆ ಸೇನೆ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಹರಿಯಾಣ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ.ಎಸ್. ಸಂಧು ಅವರು ಹೇಳಿದ್ದಾರೆ. 

ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದ್ರ ಛತ್ರಪತಿ ಮತ್ತು ಡೇರಾದ ಮಾಜಿ ವ್ಯವಸ್ಥಾಪಕ ರಂಜಿತ್ ಸಿಂಗ್ ಅವರ ಹತ್ಯೆ ಪ್ರಕರಣಗಳಲ್ಲಿ ಗುರ್ಮಿತ್ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಸಿಬಿಐ ನ್ಯಾಯಾಲಯದ ಇಂದು ವಿಚಾರಣೆ ನಡೆಸಲಿದೆ. 

ಪತ್ರಕರ್ತ ರಾಮಚಂದ್ರ ಅವರು ಸಾಧ್ವಿಯರ ಮೇಲಿನ ಅತ್ಯಾಚಾರ ಎಸಗಿರುವುದನ್ನು ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿ ಪ್ರಕರಣಗಳನ್ನು ಬೆಳಕಿಗೆ ತಂದಿದ್ದರು. ಗುರ್ಮಿತ್ ಅತ್ಯಾಚಾರ ಕುರಿತ ಅನಾಮಧೇಯ ಪತ್ರವನ್ನು ಪತ್ರಪತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದಾಗ ಬಳಿಕ 2002ರಲ್ಲಿ ಛತ್ರಪತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 

ಇನ್ನು ಈ ಪತ್ರವನ್ನು ಡೇರಾದ ಮಾಜಿ ವ್ಯವಸ್ಥಾಪಕರಾಗಿದ್ದ ರಂಜಿತ್ ಸಿಂಗ್ ಅವರು ಬರೆದಿದ್ದರು ಎಂಬ ಅನುಮಾನದ ಮೇಲೆ ರಂಜಿಸ್ ಸಿಂಗ್ ಅವರನ್ನೂ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. 

ಅತ್ಯಾಚಾರ ಪ್ರಕರಣ ಸಂಬಂಧ ಗುರ್ಮಿತ್ ಗೆ ಜೈಲು ಶಿಕ್ಷೆ ಪ್ರಕಟವಾದ ದಿನ ಹರಿಯಾಣ, ಪಂಜಾಬ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ವ್ಯಾಪಾಕ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ 41ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com