ನವದೆಹಲಿ: ದೇಶದ ಕಂಡ ಮಹಾನ್ ಯೋಧ ಮಾರ್ಷಲ್ ಅರ್ಜನ್ ಸಿಂಗ್ ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನ ದೆಹಲಿಯಲ್ಲಿ ಸೋಮವಾರ ನಡೆಯುತ್ತಿದ್ದು, ಈಗಾಗಲೇ ದೆಹಲಿಯ ಪ್ರಮುಖ ಬೀದಿಗಳಲ್ಲಿ ಮಾರ್ಷಲ್ ಅರ್ಜನ್ ಸಿಂಗ್ ಅವರ ಪಾರ್ಥೀವ ಶರೀರದ ಮೆರವಣಿಗೆ ಸಾಗಿದೆ.
ನಿನ್ನೆ ನಿಧನರಾಗಿದ್ದ 1965ರ ಇಂಡೋ-ಪಾಕ್ ಯುದ್ಧದ ಹೀರೋ ಭಾರತೀಯ ವಾಯು ಸೇನೆಯ ಮಾರ್ಷಲ್ ಅರ್ಜನ್ ಸಿಂಗ್ ಅವರ ಅಂತಿಮ ಸಂಸ್ಕಾರ ಇಂದು ದೆಹಲಿಯಲ್ಲಿ ನೆರವೇರಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಸೇನಾ ಗೌರವಗಳೊಂದಿಗೆ ವಾಯುಸೇನಾ ಮಾರ್ಷಲ್ ಅರ್ಜನ್ ಸಿಂಗ್ ಅವರಿಗೆ ಭಾವಪೂರ್ಣ ವಿದಾಯ ನೀಡಲಾಯಿತು.
ದೆಹಲಿಯ ಬ್ರೇರ್ ಸ್ಕ್ರೇರ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಾರ್ಷಲ್ ಅರ್ಜನ್ ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಇದಕ್ಕೂ ಮೊದಲು ದೆಹಲಿಯ ಪ್ರಮುಖ ಬೀದಿಗಳಲ್ಲಿ ಮಾರ್ಷಲ್ ಅರ್ಜನ್ ಸಿಂಗ್ ಅವರ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು. ವಾಯುಸೇನಾ ತುಕಡಿಗಳು ಸೇರಿದಂತೆ ಭಾರತೀಯ ಸೇನೆಯ ವಿವಿಧ ತುಕಡಿಗಳ ಸೈನಿಕರು ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರದ ವೇಳೆ 17 ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅರ್ಜನ್ ಸಿಂಗ್ ಅವರಿಗೆ ಗನ್ ಸೆಲ್ಯೂಟ್ ಗೌರವ ಸಲ್ಲಿಸಲಾಯಿತು.
ಇನ್ನು ಭಾರತ ಮಾತೆಯ ಅಗಲಿದ ಹೆಮ್ಮೆಯ ವೀರ ಪುತ್ರನ ಗೌರವಾರ್ಥವಾಗಿ ದೆಹಲಿಯಲ್ಲಿನ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತಿದೆ. ಅಲ್ಲದೆ ವಾಯುಪಡೆಯ 3 ಸುಖೋಯ್ ಯುದ್ಧ ವಿಮಾನಗಳು ಆಗಸದಲ್ಲಿ ವಾಯುಪಡೆಯ ಧ್ವಜ ಹಾರಾಟ ನಡೆಸುವ ಮೂಲಕ ಅಗಲಿದ ವೀರಯೋಧನಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಿತು.
ಇನ್ನು ಅರ್ಜನ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಲ್ ಕೆ ಆಡ್ವಾಣಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದೇಶದ ಭೂ, ವಾಯು ಮತ್ತು ನೌಕಾ ಪಡೆಯ ಎಲ್ಲ ಮೂರು ಮುಖ್ಯಸ್ಥರು ಭಾಗಿಯಾಗಿದ್ದರು.