ಈ ಹಿಂದೆ ಹನಿಪ್ರೀತ್ ಸಿಂಗ್ ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದು ಸುದ್ದಿಯಾಗಿ ನೇಪಾಳಕ್ಕೂ ತನಿಖಾಧಿಕಾರಿಗಳು ಹೋಗಿ ಬಂದಿದ್ದರು. ಇದೀಗ ಇದೇ ಹನಿಪ್ರೀತ್ ಸಿಂಗ್ ಕುರಿತ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ಮಾಧ್ಯಮವೊಂದು ವರದಿ ಮಾಡಿರುವಂತೆ ಬಂಧನ ಭೀತಿಯಲ್ಲಿರುವ ಹನಿಪ್ರೀತ್ ಸಿಂಗ್ ತಮ್ಮ ವಕೀಲರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿದ್ದರು ಎಂದು ಹೇಳಲಾಗಿದೆ. ದೆಹಲಿಯ ಲಜಪತ್ ನಗರದಲ್ಲಿರುವ ವಕೀಲರನ್ನು ಭೇಟಿ ಮಾಡಲು ಹನಿಪ್ರೀತ್ ಸಿಂಗ್ ಬುರ್ಖಾ ಧರಿಸಿ ಆಗಮಿಸಿದ್ದರು ಎಂದು ಹೇಳಲಾಗಿದೆ.
ಈ ಸಂಬಂಧ ಸಿಸಿಟಿವಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಬುರ್ಖಾಧರಿಸಿದ ಮಹಿಳೆಯೊಬ್ಬರು ಲಜಪತ್ ನಗರದಲ್ಲಿರುವ ವಕೀಲರ ಕಚೇರಿಗೆ ತೆರಳುತ್ತಿರುವುದು ಕಂಡುಬಂದಿದೆ. ಈ ಬುರ್ಖಾ ಧರಿಸಿದ ಮಹಿಳೆಯೇ ಹನಿ ಪ್ರೀತ್ ಸಿಂಗ್ ಇರಬಹುದು ಎಂದು ಶಂಕಿಸಲಾಗಿದೆ. ಇದಕ್ಕೆ ಇಂಬು ನೀಡುವಂತೆ ಹನಿಪ್ರೀತ್ ಸಿಂಗ್ ಕೂಡ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದು, ತಮಗೆ ಜೀವ ಬೆದರಿಕೆ ಇದೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಂ ಗೆ ಶಿಕ್ಷೆ ವಿಧಿಸಿತ್ತು. ಈ ವೇಳೆ ಪಂಚಕುಲದಲ್ಲಿ ವ್ಯಾಪಕ ಹಿಂಸಾಚಾರವಾಗಿ ಹಲವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಡೇರಾ ಆಶ್ರಮದ ಅನುಯಾಯಿಗಳಿಗೆ ಹಿಂಸಾಚಾರ ನಡೆಸಲು ಹನಿಪ್ರೀತ್ ಪ್ರಚೋದನೆ ನೀಡಿದ್ದರು ಎಂಬ ಆರೋಪವಿದೆ. ಅಲ್ಲದೆ ರಾಮ್ ರಹೀಂ ಬಂಧನದ ವೇಳೆ ಆತ ತಪ್ಪಿಸಿಕೊಂಡು ಹೋಗಲು ಆಕೆ ಸಂಚು ರೂಪಿಸಿದ್ದಳು ಎಂಬ ಗಂಭೀರ ಆರೋಪ ಕೂಡ ಆಕೆಯ ಮೇಲಿದ್ದು, ಇದಲ್ಲದೆ ಆಶ್ರಮದಲ್ಲಿ ನಡೆದ ಹಲವು ಅಪರಾಧ ಪ್ರಕರಣಗಳಲ್ಲೂ ಹನಿಪ್ರೀತ್ ಸಿಂಗ್ ಪೊಲೀಸರಿಗೆ ಬೇಕಾಗಿದ್ದಾಳೆ. ಇದೇ ಕಾರಣಕ್ಕೆ ಆಕೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.