ಹರಿಯಾಣ ಪೊಲೀಸರು ಇಂದು ಬೆಳಿಗ್ಗೆ ಅರೆಸ್ಟ್ ವಾರೆಂಟ್ ಸಮೇತ ಎ-9 ಗ್ರೇಟರ್ ಕೈಲಾಶ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಹನಿಪ್ರೀತ್ ಪತ್ತೆಯಾಗದ ಹಿನ್ನಲೆಯಲ್ಲಿ ನಿರಾಶೆಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಈ ಹಿಂದೆ ಹೇಳಿಕೆ ನೀಡಿದ್ದ ಹನಿಪ್ರೀತ್ ಪರ ವಕೀಲ ಪ್ರದೀಪ್ ಆರ್ಯ ಅವರು, ಕಳೆದ ಸೋಮವಾರ ಹನಿಪ್ರೀತ್ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಗೆ ಸಹಿ ಹಾಕಲು ತನ್ನ ಕಚೇರಿಗೆ ಬಂದಿದ್ದಳು ಎಂದು ಹೇಳಿದ್ದರು. ಈ ಹೇಳಿಕೆ ಪೊಲೀಸರಿಗೆ ಸಾಕಷ್ಟು ಅಚ್ಚರಿಯನ್ನುಂಟು ಮಾಡಿತ್ತು.
ಇದರಂತೆ ಹರಿಯಾಣದ ಪಂಚಕುಲ ಪೊಲೀಸರು ಅರೆಸ್ಟ್ ವಾರೆಂಟ್ ಸಮೇತ ಹನಿಪ್ರೀತ್ ಬಂಧಿಸಲು ದೆಹಲಿಗೆ ಬಂದಿದ್ದರು. ಹನಿಪ್ರೀತ್ ಗಾಗಿ ಇಲ್ಲಿಯ ಗ್ರೇಟರ್ ಕೈಲಾಶ್'ನ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆದರೆ, ಹನಿಪ್ರೀತ್ ಪತ್ತೆಯಾಗಿರಲಿಲ್ಲ.
ನಿರೀಕ್ಷಣಾ ಜಾಮೀನಿಗಾಗಿ ಹನಿಪ್ರೀತ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಗುರ್ಮಿತ್ ಬಂಧನದ ವೇಳೆ ಆತನನ್ನು ಅಪಹರಣ ಮಾಡಲು ಡೇರಾ ಗೂಂಡಾಗಳು ಯೋಜನೆ ರೂಪಿಸಿದ್ದರು. ಈ ಯೋಜನೆಯಲ್ಲಿ ಹನಿಪ್ರೀತ್, ಆದಿತ್ಯಾ ಇನ್ಸಾನ್, ಪವನ್ ಇನ್ಸಾನ್ ಮೂವರ ಕೈವಾಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1 ರಂದು ಹನಿಪ್ರೀತ್ ಸೇರಿ ಮೂವರಿಗೂ ಹರಿಯಾಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದಾದ ಬಳಿಕ ಹನಿಪ್ರೀತ್ ನಾಪತ್ತೆಯಾಗಿದ್ದಳು.