ಹನಿಪ್ರೀತ್'ಗಾಗಿ ತೀವ್ರಗೊಂಡ ಹುಡುಕಾಟ: ದೆಹಲಿ ನಿವಾಸದಲ್ಲಿ ಶೋಧ

ಪಂಚಕುಲದಲ್ಲಿ ಡೇರಾ ಹಿಂಸಾಚಾರ ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಹನಿಪ್ರೀತ್ ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ ಆಕೆಯ...
ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಆತನ ದತ್ತು ಪುತ್ರಿ ಹನಿಪ್ರೀತ್
ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಆತನ ದತ್ತು ಪುತ್ರಿ ಹನಿಪ್ರೀತ್
Updated on

ನವದೆಹಲಿ: ಪಂಚಕುಲದಲ್ಲಿ ಡೇರಾ ಹಿಂಸಾಚಾರ ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಹನಿಪ್ರೀತ್ ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ ಆಕೆಯ ನಿವಾಸದ ಮೇಲೆ ಹರಿಯಾಣ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 

ಹರಿಯಾಣ ಪೊಲೀಸರು ಇಂದು ಬೆಳಿಗ್ಗೆ ಅರೆಸ್ಟ್ ವಾರೆಂಟ್ ಸಮೇತ ಎ-9 ಗ್ರೇಟರ್ ಕೈಲಾಶ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಹನಿಪ್ರೀತ್ ಪತ್ತೆಯಾಗದ ಹಿನ್ನಲೆಯಲ್ಲಿ ನಿರಾಶೆಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಈ ಹಿಂದೆ ಹೇಳಿಕೆ ನೀಡಿದ್ದ ಹನಿಪ್ರೀತ್ ಪರ ವಕೀಲ ಪ್ರದೀಪ್ ಆರ್ಯ ಅವರು, ಕಳೆದ ಸೋಮವಾರ ಹನಿಪ್ರೀತ್ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಗೆ ಸಹಿ ಹಾಕಲು ತನ್ನ ಕಚೇರಿಗೆ ಬಂದಿದ್ದಳು ಎಂದು ಹೇಳಿದ್ದರು. ಈ ಹೇಳಿಕೆ ಪೊಲೀಸರಿಗೆ ಸಾಕಷ್ಟು ಅಚ್ಚರಿಯನ್ನುಂಟು ಮಾಡಿತ್ತು. 

ಇದರಂತೆ ಹರಿಯಾಣದ ಪಂಚಕುಲ ಪೊಲೀಸರು ಅರೆಸ್ಟ್ ವಾರೆಂಟ್ ಸಮೇತ ಹನಿಪ್ರೀತ್ ಬಂಧಿಸಲು ದೆಹಲಿಗೆ ಬಂದಿದ್ದರು. ಹನಿಪ್ರೀತ್ ಗಾಗಿ ಇಲ್ಲಿಯ ಗ್ರೇಟರ್ ಕೈಲಾಶ್'ನ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆದರೆ, ಹನಿಪ್ರೀತ್ ಪತ್ತೆಯಾಗಿರಲಿಲ್ಲ. 

ನಿರೀಕ್ಷಣಾ ಜಾಮೀನಿಗಾಗಿ ಹನಿಪ್ರೀತ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ. 

ಗುರ್ಮಿತ್ ಬಂಧನದ ವೇಳೆ ಆತನನ್ನು ಅಪಹರಣ ಮಾಡಲು ಡೇರಾ ಗೂಂಡಾಗಳು ಯೋಜನೆ ರೂಪಿಸಿದ್ದರು. ಈ ಯೋಜನೆಯಲ್ಲಿ ಹನಿಪ್ರೀತ್, ಆದಿತ್ಯಾ ಇನ್ಸಾನ್, ಪವನ್ ಇನ್ಸಾನ್ ಮೂವರ ಕೈವಾಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1 ರಂದು ಹನಿಪ್ರೀತ್ ಸೇರಿ ಮೂವರಿಗೂ ಹರಿಯಾಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದಾದ ಬಳಿಕ ಹನಿಪ್ರೀತ್ ನಾಪತ್ತೆಯಾಗಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com