ನಾಗಪಟ್ಟಣಂ: ವೇದಾರಣ್ಯಂ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ದಾಳಿ ನಡೆಸಿದ್ದು, ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಗಾಯಗೊಂಡ ಮೀನುಗಾರರು ನಾಗಪಟ್ಟಣಂ ಜಿಲ್ಲೆಯ ನಾಗೋರ್ ನಿವಾಸಿಗಳಾಗಿದ್ದು, ಬುಧವಾರ ತಡರಾತ್ರಿ ಮೀನುಗಾರರ ಮೇಲೆ ಲಂಕಾ ಪಡೆ ದಾಳಿ ನಡೆಸಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ ಗಂಗಾಧರನ್ ಅವರು ಹೇಳಿದ್ದಾರೆ.
ಲಂಕಾ ನೌಕಾಪಡೆ ಸಿಬ್ಬಂದಿ ನಮ್ಮ ನಾವು ಹಿಡಿದ ಮೀನು, ಜಿಪಿಎಸ್ ಸಲಕರಣೆ ಮತ್ತು ಬಲೆಯನ್ನು ಕಿತ್ತುಕೊಂಡಿದ್ದಾರೆ ಎಂದು ಗಾಯಗೊಂಡ ಮೀನುಗಾರ ರಮೇಶ್ ಅವರು ಆರೋಪಿಸಿದ್ದಾರೆ.
ಗಾಯಗೊಂಡ ಐವರು ಮೀನುಗಾರರು ಇಂದು ಬೆಳಗ್ಗೆ ತವರಿಗೆ ಮರಳಿದ್ದು, ಅವರನ್ನು ನಾಗಪಟ್ಟಣಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕರಾವಳಿ ಭದ್ರತಾ ಪಡೆ ಪೊಲೀಸರಿಗೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಗಂಗಾಧರನ್ ಅವರು ತಿಳಿಸಿದ್ದಾರೆ.