ಚೆನ್ನೈ : ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಂತೆಯೇ ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತ ಚರ್ಚೆ ನಡೆಯುತ್ತಿದ್ದು, ಭಾರತೀಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸುವುದರೊಂದಿಗೆ ಒಂದು ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಒಂದು ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿ ಕಡ್ಡಾಯಗೊಳಿಸುವುದನ್ನು ಬೆಂಬಲಿಸಲು ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆಯಲ್ಲಿ ಚುನಾವಣಾ ಆಯೋಗ ಏಪ್ರಿಲ್ 4 ರಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.
ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರಮೋದಿ, ಸೋನಿಯಾಗಾಂಧಿ, ಜೆ. ಜಯಲಲಿತಾ ಸೇರಿದಂತೆ ಹಲವು ಮಂದಿ ರಾಜಕಾರಣಿಗಳು ಈ ಹಿಂದೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ.
ಈ ಮಧ್ಯೆ ಒಂದು ಕ್ಷೇತ್ರ ಒಬ್ಬ ಅಭ್ಯರ್ಥಿ ಕಡ್ಡಾಯವನ್ನು ಹಲವು ರಾಜಕೀಯ ಪಕ್ಷಗಳು ಬೆಂಬಲಿಸಿದ್ದರೆ, ಮತ್ತೆ ಕೆಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಅಭಿಪ್ರಾಯಪಟ್ಟಿದೆ.ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಆಗುವ ಮೊದಲೇ ರಾಷ್ಟ್ರಮಟ್ಟದಲ್ಲಿ ಒಮ್ಮತ ಮೂಡಬೇಕಾಗಿದೆ ಎಂದು ಹಲವು ನಾಯಕರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಲೋಕಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದರೆ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆ ಕ್ಷೇತ್ರಕ್ಕೆ ಮತ್ತೆ ಉಪ ಚುನಾವಣೆ ನಡೆಸಬೇಕಾಗುತ್ತದೆ. ಇದು ಒಂದು ಸಂವಿಧಾನದ ಬಗ್ಗೆಗಿನ ಜನರ ನಂಬಿಕೆ ಕಡಿಮೆಯಾಗುತ್ತದೆ. ಜೊತೆಗೆ ಅನಗತ್ಯವಾಗಿ ವೆಚ್ಚ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇದೊಂದು ಒಳ್ಳೆಯ ತೀರ್ಮಾನವಾಗಿದೆ. ತೆರಿಗೆದಾರರ ಹಣ ಅನಗತ್ಯವಾಗಿ ಪೋಲಾಗುವುದು ತಪ್ಪಲಿದೆ ಎಂದು ಮಾಜಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮಗಳ ರಾಜ್ಯ ಸಚಿವ ಇ ಎಂ ಸುದರ್ಶನ ನಾಚಿಯಪ್ಪನ್ ಹೇಳುತ್ತಾರೆ.
ಆದಾಗ್ಯೂ ಎಐಎಡಿಎಂಕೆಯ ವಕ್ತಾರ ವೈಗೈಚೆಲ್ವನ್ ಭಿನ್ನ, ಇದು ಜನರ ಆಯ್ಕೆ ಎಂದು ಹೇಳುವ ಮೂಲಕ ದೃಷ್ಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ನಡೆಯನ್ನು ಒಪ್ಪುವುದಾಗಿ ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ, ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಒಮ್ಮತ ಮೂಡಬೇಕಾಗಿದ್ದು, ಅಂತಿಮವಾಗಿ ಸಂಸತ್ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
Advertisement