ಛತ್ತೀಸ್ ಘಡ: ನಕ್ಸಲ್ ಪೀಡಿತ ಪ್ರದೇಶವಾದ ಸುಕ್ಮಾ ಜಿಲ್ಲೆಯ ಹಳ್ಳಿಯೊಂದು 15 ವರ್ಷಗಳ ನಂತರ ಮರು ವಿದ್ಯುತ್ ಸಂಪರ್ಕ ಪಡೆದುಕೊಂಡಿದೆ.
ನಕ್ಸಲೀಯರ ಹಾವಳಿಯಿಂದಾಗಿ ಚಿಂತಾಲ್ ನಾರ್ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ವಿದ್ಯುತ್ ಕಂಬಗಳು ಧರೆಗುರುಳಿ ಬಿದಿದ್ದವು.
ಸುಕ್ಮಾ ಜಿಲ್ಲಾಕೇಂದ್ರದಿಂದ 80 ಕಿಲೋ ಮೀಟರ್ ದೂರದಲ್ಲಿರುವ ಈ ಹಳ್ಳಿಯಲ್ಲಿ ನಕ್ಸಲ್ ಚಟುವಟಿಕೆಯಿಂದಾಗಿ ಮೂಲ ಸೌಲಭ್ಯಗಳಿಂದ ವಂಚಿತವಾಗಿತ್ತು. ಆದರೆ. ಇದೀಗ ನಕ್ಸಲೀಯರ ಹಾವಳಿ ಕಡಿಮೆಯಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ.
ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಒದಗಿಸುತ್ತಿರುವುದಕ್ಕೆ ಗ್ರಾಮಸ್ಥರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಒದಗಿಸುತ್ತಿರುವುದು ಮರು ಜನ್ಮ ನೀಡಿದಂತಾಗುತ್ತಿದೆ . ಇದರಿಂದಾಗಿ ರಾತ್ರಿ ವೇಳೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸರ್ಕಾರ 2018 ಜೂನ್ ಒಳಗೆ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ್ದು, ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಲೈನ್ ಅಳವಡಿಸಲಾಗುತ್ತಿದೆ.
ವಿದ್ಯುತ್ ಇಲ್ಲದೆ ನಕ್ಸಲೀಯರು ಯೋಧರನ್ನು ಬಲಿಪಡಿಕೊಂಡಿದ್ದಾರೆ. ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ರಮಣ್ ಸಿಂಗ್ ತಿಳಿಸಿದ್ದಾರೆ.
ಚಿಂತಲ್ ನಾರ್ ಗ್ರಾಮದಲ್ಲಿ 2010 ರಲ್ಲಿ ಮಾವೋವಾದಿಗಳ ಅಮಾನುಷ ಕೃತ್ಯದಿಂದಾಗಿ 76 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
Advertisement