ಉತ್ತರ ಪ್ರದೇಶ : ಉನ್ನಾವೊ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ತಂದೆಯ ಮೃತದೇಹದ ಅಂತ್ಯಸಂಸ್ಕಾರ ಇನ್ನೂ ಆಗದಿದ್ದರೆ ಅಂತ್ಯಸಂಸ್ಕಾರ ಮಾಡದಂತೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.
ಬಿಜೆಪಿಯ ಶಾಸಕ, ಆತನ ಸಹೋದರರು ಹಾಗೂ ಆಪ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು 18 ವರ್ಷದ ಯುವತಿ ಆರೋಪಿಸಿದ ಬಳಿಕ ಆತ ಸೋಮವಾರ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ಹಿರಿಯ ವಕೀಲ ಗೋಪಾಲ್ ಸ್ವರೂಪ್ ಚತುರ್ವೇದಿ ಪತ್ರದ ಮುಖೇನ ಸಮಗ್ರ ಮಾಹಿತಿಯನ್ನು ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಮುಖ್ಯ ನ್ಯಾಯಾಧೀಶ ಡಿ. ಬಿ. ಬೊಸಾಲೆ ಮತ್ತು ನ್ಯಾಯಾಧೀಶರಾದ ಸುನೀತ್ ಕುಮಾರ್ ಅವರಿದ್ಧ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದ್ದಾರೆ.
ಒಂದು ವೇಳೆ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡದಿದ್ದರೆ ಅದನ್ನು ಅಂತ್ಯಸಂಸ್ಕಾರ ಮಾಡದಂತೆ ನ್ಯಾಯಾಲಯ ಹೇಳಿದೆ. ಸಂತ್ರಸ್ತೆಯ ತಂದೆಯ ಸಾವು ಅಮಾನುಷ ಅಪರಾಧವಾಗಿದ್ದು, ಪ್ರಾಮಾಣಿಕ ತನಿಖೆ ನಡೆಸಬೇಕೆಂದು ವಕೀಲ ಚತುರ್ವೇದಿ ಒತ್ತಾಯಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಸರ್ಕಾರದ ನಿಲುವು ತಿಳಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಏ. 12ಕ್ಕೆ ಮುಂದೂಡಿದೆ.
ಆದಾಗ್ಯೂ, ಸಂತ್ರಸ್ತೆಯ ತಂದೆಯ ಮೃತದೇಹವನ್ನು ನಿನ್ನೆಯೇ ಅಂತ್ಯಸಂಸ್ಕಾರ ಮಾಡಲಾಗಿದೆ.
ಈ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸಹೋದರ ಅತುಲ್ ಸಿಂಗ್ ಅವರನ್ನು ನಿನ್ನೆ ದಿನ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
Advertisement