ನವದೆಹಲಿ : ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಾದ ಕೂಡಲೇ ಅಧಿಕಾರಿಗಳನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಹೊರಡಿಸಿರುವ ಆದೇಶ ಹಿನ್ನೆಲೆಯಲ್ಲಿ ಮೂಲ ಕಾಯ್ದೆಯಲ್ಲಿನ ನಿಬಂಧನೆಗಳನ್ನು ಪುನರ್ ಸ್ಥಾಪಿಸಲು ಸುಗ್ರೀವಾಜ್ಞೆ ಸೇರಿದಂತೆ ವಿವಿಧ ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತಿದೆ.
ಕಾಯ್ದೆಯಲ್ಲಿನ ನಿಬಂಧನೆಗಳನ್ನು ಪುನರ್ ಸ್ಥಾಪಿಸಲು ಸುಗ್ರೀವಾಜ್ಞೆ ಘೋಷಿಸುವುದರಿಂದ ಶಾಂತಿ ನೆಲೆಸಲು ನೆರವಾಗಬಹುದು ಎಂಬ ವಿವಿಧ ಮಟ್ಟದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.
ಜುಲೈ ತಿಂಗಳಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ 1989ರ ತಿದ್ದುಪಡಿ ಮಸೂದೆಯನ್ನು ಮಂಡಿಸುವುದು ಸರ್ಕಾರದ ಮುಂದಿರುವ ಎರಡನೇಯ ಪರ್ಯಾಯವಾಗಿದೆ ಎಂದು ಮೂಲಗಳು ಹೇಳಿವೆ.
ಒಂದು ವೇಳೆ ಸುಗ್ರೀವಾಜ್ಞೆ ಹೊರಡಿಸಿದರೆ ಸಂಸತ್ತಿನಲ್ಲಿ ಮಸೂದೆ ಆಗಿ ಪರಿವರ್ತನೆಯಾಗುತ್ತದೆ. ಈ ಎರಡು ಪರ್ಯಾಯಗಳ ಮೂಲಕ ಮೂಲ ಕಾಯ್ದೆಯಲ್ಲಿನ ನಿಬಂಧನೆಗಳನ್ನು ಪುನರ್ ಸ್ಥಾಪಿಸಬಹುದು. ಸುಗ್ರೀವಾಜ್ಞೆಯ ತ್ವರಿತ ಫಲಿತಾಂಶದ ಅನುಕೂಲದಿಂದ ಕೂಡಲೇ ಆಕ್ರೋಶವನ್ನು ತಣ್ಣಗಾಗಿಸಬಹುದು ಎಂದು ತಜ್ಞರೊಬ್ಬರು ಹೇಳುತ್ತಾರೆ.
ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ಮಾರ್ಚ್ 20 ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಏ. 2 ರಂದು ವಿವಿಧ ದಲಿತರ ಪರ ಸಂಘಟನೆಗಳಿಂದ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು, ಕೆಲವು ಕಡೆ ಹಿಂಸಾಚಾರ ಸಂಭವಿಸಿ ಹಲವು ಜನರು ಸಾವನ್ನಪ್ಪಿದ್ದರು. ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಪರಿಶಿಷ್ಟ ಜಾತಿ, ಪಂಗಡದ ಸಮುದಾಯವನ್ನು ಕಾನೂನಿನ ರಕ್ಷಣೆಯಿಂದ ತಪ್ಪಿಸಿ ನಿರಾಸೆಗೊಳಿಸುವಂತಹ ಕೆಲಸವನ್ನು ಸರ್ಕಾರ ಎಂದಿಗೂ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಮೊನ್ನೆದಿನ ಹೇಳಿಕೆ ನೀಡಿದ್ದರು.
ಸಾಮಾಜಿಕ ನ್ಯಾಯ ಮತ್ತು ಬಲವರ್ದನೆಯ ಸಚಿವಾಲಯ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆ ಆಧಾರದ ಮೇಲೆ ಇದು ನಿರ್ಧಾರವಾಗಲಿದೆ . ಸುಪ್ರೀಂಕೋರ್ಟ್ ತೀರ್ಪು ಪರವಾಗಿ ಬರಲಿದೆ ಎಂಬ ವಿಶ್ವಾಸವಿಲ್ಲ. ಹೀಗಾಗಿ ಸರ್ಕಾರ ಮುಂದಿನ ಕ್ರಮದ ಮೇಲೆ ಸರ್ಕಾರ ತನ್ನ ನಿಲುವನ್ನು ಸ್ಥಾಪಿಸಲಿದೆ ಎಂದು ಮೂಲಗಳು ಹೇಳಿಕೆ ನೀಡಿವೆ.
ಎಸ್ ಸಿಎಸ್ ಟಿ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಜನರಲ್ಲಿ ಸೌಹಾರ್ದತೆ ಭಾವನೆ ಮೇಲೆ ಪರಿಣಾಮ ಬೀಳಲಿದ್ದು, ತುಂಬಾ ನಷ್ಟವಾಗಲಿದೆ ಎಂದು ಕೇಂದ್ರಸರ್ಕಾರ ಸುಪ್ರೀಂಕೋರ್ಟ್ ಗೆ ಹೇಳಿಕೆ ಸಲ್ಲಿಸಿದೆ.
ಸರ್ಕಾರದ ಹೇಳಿಕೆಯ ಒಂದು ವಾರದ ನಂತರ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್ , ತನ್ನ ತೀರ್ಪನ್ನು ಅಮಾನತು ಮಾಡಲು ಸಾಧ್ಯವಿಲ್ಲ. ಎಸ್ ಸಿ ಎಸ್ ಟಿ ಕಾಯ್ದೆ ಸಂಬಂಧ ನೀಡಿರುವ ತೀರ್ಪುನ್ನು ಪ್ರತಿಭಟನಾಕಾರರು ಓದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ದಾರಿತಪ್ಪಿಸುತ್ತಿವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
Advertisement