ತಾಯಿಯ ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್ ಗೀಳಿಗೆ ಅನಾಥರಾದ ಮಕ್ಕಳು: ಪತಿಯಿಂದಲೇ ಪತ್ನಿ ಹತ್ಯೆ

ಅತಿಯಾದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್ ಗೀಳು ಮಹಿಳೆಯೊಬ್ಬಳ ಪ್ರಾಣಕ್ಕೆ ಎರವಾಗಿದೆ. ಕೊಲೆಯಾದ ಮಹಿಳೆ ಸಾಮಾಜಿಕ ಜಾಲತಾಣಗಳ ಅತಿಯಾದ ಗೀಳು ಹೊಂದಿದ್ದಳು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಹರ್ಯಾಣ: ಅತಿಯಾದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್  ಗೀಳು ಮಹಿಳೆಯೊಬ್ಬಳ ಪ್ರಾಣಕ್ಕೆ ಎರವಾಗಿದೆ.
ಕೊಲೆಯಾದ ಮಹಿಳೆ ಸಾಮಾಜಿಕ ಜಾಲತಾಣಗಳ ಅತಿಯಾದ ಗೀಳು ಹೊಂದಿದ್ದಳು. ಸಿಕ್ಕವರ ಜತೆ ಚಾಟಿಂಗ್‌ ಮಾಡುತ್ತ ಮನೆ ಮತ್ತು ಮಕ್ಕಳ ಬಗ್ಗೆ ಕಾಳಜಿಯನ್ನೇ ಬಿಟ್ಟಿದ್ದಳು ಎಂದು ಆಕೆಯ ಪತಿ ಹರಿಓಂ (35) ವಿಚಾರಣೆ ವೇಳೆ ಆರೋಪಿಸಿದ್ದಾನೆ.
ಪತ್ನಿ ತನ್ನ ಬಗ್ಗೆ ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ; ಪತ್ನಿಯಾಗಿ, ತಾಯಿಯಾಗಿ ವಹಿಸಬೇಕಾದ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಆಕ್ರೋಶಗೊಂಡ ಗಂಡ ಆಕೆ ನಿದ್ರಿಸುತ್ತಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಆರೋಪಿ ಹರಿಓಂ ಐಎಂಟಿ-ಮನೇಸರ್‌ನಲ್ಲಿ ಕಂಪ್ಯೂಟರ್‌ ದುರಸ್ತಿ ಅಂಗಡಿ ಇಟ್ಟುಕೊಂಡಿದ್ದಾನೆ. ಪೊಲೀಸರು ಆತನನ್ನು ಕೋರ್ಟಿಗೆ ಹಾಜರುಪಡಿಸಿದ್ದು, ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
'2006ರಲ್ಲಿ ನಮ್ಮ ಮದುವೆಯಾಯಿತು. ನಮಗೆ ಇಬ್ಬರು ಮಕ್ಕಳಿದ್ದಾರೆ. ಮೊದಲ ಕೆಲವು ವರ್ಷಗಳ ವರೆಗೆ ಎಲ್ಲವೂ ಚೆನ್ನಾಗಿತ್ತು. ನಂತರ ನಾನು ಅವಳಿಗೆ ಒಂದು ಸ್ಮಾರ್ಟ್‌ಫೋನ್‌ ತೆಗೆದುಕೊಟ್ಟೆ. ಅದು ಆಕೆಯ ಜೀವನವನ್ನೇ ಬದಲಿಸಿತು. ಇತ್ತೀಚೆಗೆ ಎರಡು ವರ್ಷಗಳಿಂದ ಆಕೆ ಮನೆ, ಮಕ್ಕಳು ಎಲ್ಲವನ್ನೂ ಮರೆತು ಮೊಬೈಲ್‌ ಫೋನ್‌ ಗೀಳಿನಲ್ಲೇ ಕಳೆದುಹೋದಳು. ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ, ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರಲಿಲ್ಲ, ಅವರಿಗೆ ಹೋಂ ವರ್ಕ್‌ ಮಾಡಲು ಹೇಳಿಕೊಡುತ್ತಿರಲಿಲ್ಲ. ಹಗಲೂ-ರಾತ್ರಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲೇ ಮುಳುಗಿರುತ್ತಿದ್ದಳು' ಎಂದು ಆತ ದೂರಿದ್ದಾನೆ.
'ಮೊದಮೊದಲು ನಾನು ಅದನ್ನೆಲ್ಲ ಕಡೆಗಣಿಸಿದೆ. ಸ್ವಲ್ಪ ದಿನಗಳಲ್ಲೇ ಆಕೆ ಮೊಬೈಲ್ ಗೀಳಿನಿಂದ ಹೊರಬಹುದು ಎಂದುಕೊಂಡೆ. ಆದರೆ ದಿನಗಳೆದಂತೆ ಪರಿಸ್ಥಿತಿ ತೀರಾ ಹದಗೆಟ್ಟಿತೇ ಹೊರತು ಸುಧಾರಿಸಲಿಲ್ಲ. ಪ್ರತಿದಿನ ನಾವು ಜಗಳವಾಡತೊಡಗಿದೆವು. ಮಕ್ಕಳ ಮೇಲೂ ಇದರಿಂದ ದುಷ್ಪರಿಣಾಮ ಬೀರತೊಡಗಿತು' ಪತ್ನಿಯ ನಿರ್ಲಕ್ಷ್ಯಕ್ಕೆ ಬೇಸತ್ತು ಇಬ್ಬರೂ ಮಕ್ಕಳನ್ನು ಕುರುಕ್ಷೇತ್ರದ ಬೋರ್ಡಿಂಗ್ ಶಾಲೆಗೆ ಸೇರಿಸಿದ್ದಾಗಿ ಹರಿಓಂ ತಿಳಿಸಿದ್ದಾನೆ.
'ಮನೆಯಲ್ಲಿ ಮಕ್ಕಳಿಲ್ಲದಿದ್ದರೂ ಆಕೆಗೆ ಏನೂ ಅನಿಸುತ್ತಿರಲಿಲ್ಲ. ಬದಲಾಗಿ ಮೊಬೈಲ್‌ ಫೋನ್‌ನಲ್ಲಿ ಮತ್ತಷ್ಟು ಹೆಚ್ಚು ಕಾಲ ಕಳೆಯತೊಡಗಿದಳು. ಅವಳ ಸೋಶಿಯಲ್ ಮೀಡಿಯಾ ಖಾತೆಗಳನ್ನು ನೋಡಲು ನನಗೆ ಯಾವತ್ತೂ ಬಿಟ್ಟಿರಲಿಲ್ಲ. ಅವಳಿಗೆ ಬೇರೆ ಯಾರದೋ ಜತೆಗೆ ಸಂಬಂಧವಿರಬಹುದು ಎಂದು ಶಂಕಿಸಿದೆ. ಮೊನ್ನೆ ಗುರುವಾರ ರಾತ್ರಿ ನಾವಿಬ್ಬರೂ ಇದೇ ವಿಷಯವಾಗಿ ಭಾರಿ ಜಗಳವಾಡಿದೆವು. ನಂತರ ಆಕೆ ನಿದ್ರಿಸಿದಾಗ ಇನ್ನು ನಾನು ಇದನ್ನೆಲ್ಲ ಸಹಿಸಿಕೊಳ್ಳಲಾರೆ ಎಂದು ನಿರ್ಧರಿಸಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದೆ' ಎಂದು ಆತ ಪೊಲೀಸರಿಗೆ ಘಟನೆಯ ವಿವರಗಳನ್ನು ನೀಡಿದ್ದಾನೆ.
ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಆಕೆಯ  ತಂದೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com