ಕರ್ನೂಲ್: ಕಲ್ಲಿನ ಕ್ವಾರಿಯಲ್ಲಿ ಭಾರಿ ಸ್ಫೋಟ ಸಂಭವಿಸಿ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭಿರವಾಗಿ ಗಾಯಗೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹತ್ತಿಬೆಳಗಲ್ ಗ್ರಾಮದ ಶುಕ್ರವಾರ ರಾತ್ರಿ ನಡೆದಿದೆ.
ಇಂದು ರಾತ್ರಿ 8.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮೂರು ಟ್ರಾಕ್ಟರಗಳು, ಒಂದು ಲಾರಿ ಮತ್ತು ಶೆಡ್ ಹೊತ್ತಿ ಉರಿಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕಾರ್ಮಿಕರು ಬಿಹಾರ, ಪಂಜಾಬ್ ಮತ್ತು ಇತರೆ ರಾಜ್ಯದವರು ಎನ್ನಲಾಗಿದ್ದು, ಕ್ವಾರಿಯಲ್ಲಿ ಸುಮಾರು 30 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದ ಸದ್ದು ಸುಮಾರು 10 ಕಿ.ಮೀ.ವರೆಗೆ ಕೇಳಿಸಿದ್ದು, ಸುತ್ತಲಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ ಮತ್ತು ಕೆಲವು ಮನೆಗಳು ಬಿರುಕು ಬಿಟ್ಟಿವೆ.