ನವದೆಹಲಿ: ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಭಾರತ ಸರ್ಕಾರದ ಸಲಹೆ ಪಡೆಯುವುದಾಗಿ ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಇಮ್ರಾನ್ ಖಾನ್ ಪದ ಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಗವಾಸ್ಕರ್ ಜೊತೆಗೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಆಹ್ವಾನ ನೀಡಲಾಗಿದೆ. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ 1992ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು.
ನಾನು ಪಾಕಿಸ್ತಾನಕ್ಕೆ ಹೋಗಬಹುದೇ ಎಂದು ಸರ್ಕಾರ ಸಲಹೆ ಪಡೆಯುತ್ತೇನೆ. ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದರೆ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹೋಗುವುದಾಗಿ ಗವಾಸ್ಕರ್ ಹೇಳಿದ್ದಾರೆ.
ನಿನ್ನೆಯಷ್ಟೇ ಇಮ್ರಾನ್ ಖಾನ್ ಕಚೇರಿಯಿಂದ ಆಹ್ವಾನ ಬಂದಿದೆ. ಪಾಕಿಸ್ತಾನಕ್ಕೆ ಹೋಗಲು ಇಷ್ಟವಿದೆ. ಆದಾಗ್ಯೂ, ಪದಗ್ರಹಣ ಸಮಾರಂಭದ ದಿನಾಂಕ ಇನ್ನೂ ತಿಳಿದುಬಂದಿಲ್ಲ ಆಗಸ್ಟ್ 15 ಆದರೆ, ಅಂದು ಅಮ್ಮನ 93 ನೇ ಜನ್ಮ ದಿನ ಹಾಗೂ ಸ್ವಾತಂತ್ರ್ಯ ದಿನವಾಗಿದ್ದು, ಅಂದು ಹೋಗಲು ಸಾಧ್ಯವಿಲ್ಲ. ಅಂದೇ ಸಂಜೆ ಮೂರು ಟೆಸ್ಟ್ ಕ್ರಿಕೆಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಗವಾಸ್ಕರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
1992ರಲ್ಲಿ ಪಾಕಿಸ್ತಾನ ವಿಶ್ವಕಪ್ ಗೆದ್ದುಕೊಂಡಾಗ ಲಾಹೋರ್ ನಲ್ಲಿ ಆಯೋಜಿಸಿದ್ದ ತಂಡದ ಸನ್ಮಾನ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಲಾಗಿತ್ತು ಎಂದು ನೆನಪು ಮಾಡಿಕೊಳ್ಳುವ ಗವಾಸ್ಕರ್, ಇಮ್ರಾನ್ ಖಾನ್ ಚುನಾವಣೆಯಲ್ಲಿ ಗೆದ್ದಿರುವುದರಿಂದ ಭಾರತೀಯರಿಗೂ ಖುಷಿಯಾಗಿದೆ. ಅವರಿಗೆ ಮಹತ್ವದ ಜವಾಬ್ದಾರಿ ದೊರಕಿದ್ದು, ಅದಕ್ಕಾಗಿ ಅವರು ಶ್ರಮಪಟ್ಟು ಕೆಲಸ ಮಾಡಲಿದ್ದಾರೆ ಎಂದು ಗವಾಸ್ಕರ್ ಭರವಸೆಯ ಮಾತುಗಳನ್ನಾಡಿದ್ದಾರೆ.
Advertisement