ಶ್ರೀನಗರ: ಉಗ್ರರಿಂದ ಅಪಹರಣಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸಿದ್ದ ಇಬ್ಬರು ಯುವಕರ ಪೈಕಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆಯಷ್ಟೇ ಮೆಹ್ರಾಜ್ ಅಹ್ಮದ್ ಹಾಗೂ ಆರೀಫ್ ಅಹ್ಮದ್ ಎಂಬ ಇಬ್ಬರು ಯುವಕರನ್ನು ಉಗ್ರರು ಅಪಹರಣ ಮಾಡಿದ್ದರು. ತೀವ್ರ ಹುಡುಕಾಟ ನಡೆಸಿದ ಪೊಲೀಸರಿಗೆ ಆರೀಫ್ ತೀವ್ರ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆರೀಫ್ ದೇಹದ ಮೇಲೆ ಚಿತ್ರಹಿಂಸೆ ನೀಡಿದ್ದ ಗಾಯಗಳ ಗುರುತುಗಳಿರುವುದು ಕಂಡು ಬಂದಿತ್ತು.
ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.