ಕಂದಹಾರ್ ವಿಮಾನ ಅಪಹರಣವನ್ನು ವಾಜಪೇಯಿ ನಿರ್ವಹಿಸಿದ ರೀತಿ ಹೇಗಿತ್ತು ಗೊತ್ತೆ?

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ ನಡೆದ ಘಟನೆಗಳು, ಅದಕ್ಕೆ ಪ್ರತಿಯಾಗಿ ಅವರು ತೆಗೆದುಕೊಂಡ ನಿರ್ಧಾರ....
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ
ನವದೆಹಲಿ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ ನಡೆದ ಘಟನೆಗಳು, ಅದಕ್ಕೆ ಪ್ರತಿಯಾಗಿ ಅವರು ತೆಗೆದುಕೊಂಡ ನಿರ್ಧಾರ ನಾವೆಂದೂ ಮರೆಯುವಂತಿಲ್ಲ. ಅದು ಕಾರ್ಗಿ ಇರಬಹುದು, ಕಂದಹಾರ್ ವಿಮಾನ ಅಪಹರಣವಿರಬಹುದು ಅಟಲ್ ದಿಟ್ಟ ಧೀಮಂತ ನಿಲುವಿಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿತ್ತು.
ಅದು ಡಿಸೆಂಬರ್ 24, 1999 ರಂದು ಇಂಡಿಯನ್ ಏರ್ಲೈನ್ಸ್ ವಿಮಾನ IC814, ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸುತ್ತಿತ್ತು. 176 ಪ್ರಯಾಣಿಕರಿದ್ದ ಈ ವಿಮಾನವನ್ನು ಪಾಕ್ ಉಗ್ರಗಾಮಿ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್ ಉಗ್ರರು ಅಪಹರಣ ಮಾಡಿದ್ದರು.
ದೆಹಲಿಗೆ ಆಗಮಿಸಬೇಕಾಗಿದ್ದ ವಿಮಾನನವನ್ನು ಉಗ್ರರು ಅಫ್ಘಾನಿಸ್ಥಾನ ಕಂದಹಾರ್ ಗೆ ತೆಗೆದುಕೊಂಡು ಹೋಗಿದ್ದರು.ಈ ವೇಳೆ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಉಗ್ರರು ತಮ್ಮ ಬಿಗಿ ಹಿಡಿತದಲ್ಲಿರಿಸಿಕೊಂಡಿದ್ದರು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಇದು ಬಹುದೊಡ್ಡ ಸಂಕಷ್ಟವನ್ನೇ ತಂದಿತ್ತು.
ಉಗ್ರ ಮೌಲಾನಾ ಮಸೂದ್ ಅಝರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕೆಂದು ವಿಮಾನ ಅಪಹರಿಸಿದ್ದ ಉಗ್ರರು ಬೇಡಿಕೆ ಇಟ್ಟಿದ್ದರು. 
ಏಳು ದಿನಗಳ ಕಾಲ ಉಗ್ರರ ಒತ್ತೆಯಾಳಾಗಿದ್ದ ವಿಮಾನ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಾಜಪೇಯಿ ಸರ್ಕಾರ ಜೀವಂತವಾಗಿ ಕರೆತರಲು ಭಾರತದಲ್ಲಿ ಜೈಲಿನಲ್ಲಿದ್ದ ಮೂವರು ಕುಖ್ಯಾತ ಭಯೋತ್ಪಾದಕರನ್ನು ಬಿಡುಗಡೆ ಮಾಡಿತ್ತು.
ಅಂದು ವಿದೇಶಾಂಗ ಸಚಿವ ಆಗಿದ್ದ ಜಸ್ವಂತ್ ಸಿಂಗ್ ವಾಜಪೇಯಿ ಅಣತಿಯಂತೆ ಉಗ್ರರೊಡನೆ ಮಾತುಕತೆಗೆ ಮುಂದಾಗಿದ್ದರು. ಅವರು ಭಯೋತ್ಪಾದಕರಾದ ಮಸೂದ್ ಅಝರ್, ಒಮರ್ ಸಯೀದ್ ಶೇಖ್ ಮತ್ತು ಮುಷ್ಠಕ್ ಅಹ್ಮದ್ ಝಾರ್ಗರ್ ಅವರನ್ನು ಕಂದಹಾರ್ ಗೆ ಕರೆದೊಯ್ದರು.ಅಲ್ಲಿ ಅಂತಿಮ ಮಾತುಕತೆ ನಡೆಯಿತು.
ಆ ಸಮಯದಲ್ಲಿ ಪ್ರಧಾನಿ ವಾಜಪೇಯಿ ನಡೆ ವಿಪಕ್ಷಗಳು, ರಾಷ್ಟ್ರೀಯ ವಿಶ್ಲೇಷಕರಿಂದ ಟೀಕೆಗೆ ಒಲಗಾಗಿತ್ತು. ಭಾರತೀಯ ವಿರೋಧಿ ನಿಲುವು ತಾಳಿದರೆಂದು ವಾಜಪೇಯಿ ಬೇಷರತ್ ಕ್ಷಮೆ ಕೇಳಬೇಕೆಂದು ಅಂದು ಕಾಂಗ್ರೆಸ್ ಸಹ ಆಗ್ರಹಿಸಿತ್ತು.
ಆದರೆ ವಾಜಪೇಯಿಯವರಿಗೆ ವಿಮಾನದಲ್ಲಿರುವ ಪ್ರಯಾಣಿಕರು, ಸಿಬ್ಬಂದಿಗಳ ಜೀವ ರಕ್ಷಣೆಯೇ ಮುಖ್ಯವಾಗಿತ್ತು. ವಿಮಾನ ಪ್ರಯಾಣಿಕರ ಸುರಕ್ಷತೆಯೇ ದೇಶದ ಆದ್ಯತೆ ಎಂದು ಬಗೆದ ವಾಜಪೇಯಿ ಉಗ್ರರ ಬಿಡುಗಡೆ ಮಾಡಿ ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಇಂತಹಾ ಕಠಿಣ ಸಮಯದಲ್ಲಿ ಪ್ರಧಾನಿಯಾಗಿ ವಾಜಪೇಯಿ ತೆಗೆದುಕೊಂಡ ನಿರ್ಧಾರಕ್ಕೆ ದೇಶದಲ್ಲಿ ಭಾರೀ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com