ನವದೆಹಲಿ: ತಮ್ಮ ಪತ್ನಿ ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಜಿನೆವಾಗೆ ತೆರಳಲು ಸೋಮವಾರ ಕೋರ್ಟ್ ಅನುಮತಿ ನೀಡಿದೆ.
ಕಳೆದ ಶನಿವಾರ ನಿಧನರಾದ ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಸಂತಾಪ ಸೂಚಿಸಲು ಮತ್ತು ಪ್ರವಾಹ ಪೀಡಿತ ತವರು ರಾಜ್ಯ ಕೇರಳಕ್ಕೆ ಅಂತರಾಷ್ಟ್ರೀಯ ನೆರವು ಕೇಳುವುದಕ್ಕಾಗಿ ಶಶಿ ತರೂರ್ ಅವರು ಜಿನೆವಾಗೆ ತೆರಳುತ್ತಿದ್ದಾರೆ.
ಶಶಿ ತರೂರ್ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಅನುಮತಿ ನೀಡಿದ್ದಾರೆ.
ತರೂರ್ ಅವರು ಕೋಫಿ ಅನ್ನಾನ್ ಅವರ ಕೈಕೆಳಗೆ 10 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು ಅನ್ನಾನ್ ಅವರೇ ತರೂರ್ ಗೆ ಮಾರ್ಗದರ್ಶಕರಾಗಿದ್ದರು ಎಂದು ಅವರ ಪರ ವಕೀಲ ವಿಕಾಸ್ ಪಹ್ವಾ ಅವರು ಕೋರ್ಟ್ ಗೆ ತಿಳಿಸಿದರು.
ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಶಶಿ ತರೂರ್ ಅವರಿಗೆ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶದಿಂದ ಹೊರಕ್ಕೆ ಪ್ರಯಾಣ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.