
ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೊನ್ಸ್ ಕೇರಳದವರಾಗಿದ್ದು ಅಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಅಗತ್ಯದ ಕುರಿತು ಸಂದೇಶಗಳನ್ನು ರವಾನಿಸಿದ್ದಾರೆ.
ಇಂದು ನಿರಾಶ್ರಿತ ಶಿಬಿರದಲ್ಲಿ ಲಕ್ಷಗಟ್ಟಲೆ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಸಮನ್ವಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಕೇಂದ್ರ ರಕ್ಷಣಾ ಪಡೆ ಕೇರಳದಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದೆ.
ಇಲ್ಲಿನ ಮೀನುಗಾರರಿಗೆ ಅಭಿನಂದನೆ ಹೇಳಲೇಬೇಕು. ಅವರು ನಿಜವಾದ ಹೀರೋಗಳು. ಅವರು ಸುಮಾರು 600 ದೋಣಿಗಳಲ್ಲಿ ಬಂದು ಜನರನ್ನು ರಕ್ಷಿಸುತ್ತಿದ್ದಾರೆ ಎಂದಿದ್ದಾರೆ.
ಮನೆಗಳಲ್ಲಿ ವಿದ್ಯುತ್ ಇಲ್ಲ, ಕಾರ್ಪೆಂಟರ್ ಗಳು, ಪ್ಲಂಬರ್ ಗಳು ಸಿಗುತ್ತಿಲ್ಲ. ಸಾವಿರಾರು ಎಲೆಕ್ಟ್ರಿಷಿಯನ್ ಗಳು, ಪ್ಲಂಬರ್ ಗಳು, ಕಾರ್ಪೆಂಟರ್ ಗಳ ಅಗತ್ಯ ಇಂದು ಕೇರಳಕ್ಕಿದೆ. ನಮಗೆ ಆಹಾರ ಅಥವಾ ಬಟ್ಟೆ ಬೇಕಾಗಿಲ್ಲ, ತಾಂತ್ರಿಕ ಅನುಭವವಿರುವವರು ಜನಜೀವನವನ್ನು ಮರುಸ್ಥಾಪಿಸಲು, ಸಹಜ ಸ್ಥಿತಿಗೆ ತರಲು ಅಗತ್ಯವಿದ್ದಾರೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಕೊಚ್ಚಿಯಲ್ಲಿ ಇಂದು ವಾಯುಸಂಚಾರ ಆರಂಭಗೊಂಡಿದೆ.
ಐಎನ್ಎಸ್ ಗರುಡ ಕೊಚ್ಚಿ ನೌಕಾ ವಾಯುನೆಲೆಯಲ್ಲಿ ಸಂಚಾರ ಆರಂಭವಾಗಿದೆ. ಕೇರಳದಲ್ಲಿ 10 ದಿನಗಳ ಹಿಂದೆ ಪ್ರವಾಹ ಬಂದಲ್ಲಿಂದ ಕೊಚ್ಚಿ ವಿಮಾನ ನಿಲ್ದಾಣ ಸುತ್ತಮುತ್ತ ಪ್ರವಾಹ ಉಂಟಾಗಿದ್ದರಿಂದ ವಾಯುಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಕಳೆದ 100 ವರ್ಷಗಳಲ್ಲಿ ಕೇರಳದಲ್ಲಿ ಕಂಡೂ ಕೇಳಿರದ ರೀತಿಯಲ್ಲಿ ಈ ವರ್ಷ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಹೆಚ್ಚುವರಿ ರಕ್ಷಣಾ ಪಡೆ, ಹೆಲಿಕಾಪ್ಟರ್ ಮತ್ತು ಮೋಟಾರ್ ಬೋಟುಗಳನ್ನು ನಿಯೋಜಿಸಲಾಗಿದೆ.
ಜೂನ್ ನಿಂದ ಮಳೆ ಸಂಬಂಧಿ ಅವಘಡಗಳಿಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 357ಕ್ಕೇರಿದೆ. ಸುಮಾರು 8,45,000 ಮಂದಿ 3,700 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
Advertisement