ನಲ್ಗೊಂಡ(ಆಂಧ್ರ): ನಟ, ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ್ದು ಕಾರು ಅಪಘಾತದ ಭೀಕರತೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ಬಿಚ್ಚಿಟ್ಟಿದ್ದಾರೆ.
ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಫೋಟೋಗ್ರಾಫರ್ ಫೋಟೋ ಶೂಟ್ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದೇವು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ಸುಮಾರು 15 ಅಡಿ ಮೇಲಕ್ಕೆ ಹಾರಿ ನಮ್ಮ ಕಾರಿನ ಕಡೆ ಬಂತು.
ಇದನ್ನು ಕಂಡು ನಾನು ತಕ್ಷಣ ನನ್ನ ಕಾರಿನ ವೇಗವನ್ನು ಕಡಿಮೆ ಮಾಡಿ ಕಾರನ್ನು ಎಡಕ್ಕೆ ತಿರುಗಿಸಿದೆ. ಆಗ ಎದುರುಗಡೆಯಿಂದ ಬಂದ ಕಾರು ನಮ್ಮ ಕಾರಿನ ತುದಿಗೆ ತಗುಲಿ ಕೆಳಗೆ ಬಿತ್ತು.
ನಾವು ಕೂಡಲೇ ಕಾರನ್ನು ನಿಲ್ಲಿಸಿ ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ಹೊರಗಡೆ ಎಳೆದೆವು. ಆಗ ನಮಗೆ ತಿಳಿಯಿತು ಕಾರಿನಲ್ಲಿ ಇದ್ದಿದ್ದು ನಟ, ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ ಅಂತ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಂದಮೂರಿ ಹರಿಕೃಷ್ಣ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಕಾಮಿನೇನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.