ಪಾಲಿ: ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ, ಹಾಗೂ ರಾಹುಲ್ ಗಾಂಧಿ ವಿರುದ್ಧದ ಐಟಿ ಪ್ರಕರಣಗಳ ಪುನರ್ ಆರಂಭಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ ಬೆನ್ನಲ್ಲೇ ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ತಾನದ ಪಾಲಿ ಜಿಲ್ಲೆಯ ಸುಮೆರ್ ಪುರದಲ್ಲಿಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರಕ್ಕೆ ಜಯ ದೊರಕಿದ್ದು, ಚಾಯ್ ವಾಲಾನ ಧೈರ್ಯ ಮೆಚ್ಚಬೇಕು ಎಂದರು.
ಗಾಂಧಿ ಕುಟುಂಬ ನಾಲ್ಕು ತಲೆಮಾರಿನಿಂದಲೂ ಸವಲತ್ತುಗಳನ್ನು ಪಡೆದು ಖುಷಿ ಅನುಭವಿಸುತ್ತಿದ್ದು, ಅವರ ವಿರುದ್ಧದ ಐಟಿ ಪ್ರಕರಣಗಳ ಪುನರ್ ಆರಂಭಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಪ್ರಾಮಾಣಿಕತೆಗೆ ಸಂದ ಜಯ ಎಂದು ಮೋದಿ ಹೇಳಿದರು.
ನಾಲ್ಕು ತಲೆಮಾರಿನಿಂದ ದೇಶವನ್ನು ಆಳಿದವರು, ನ್ಯಾಯಾಲಯದ ಬಾಗಿಲಲ್ಲಿ ನಿಲ್ಲುವಂತಾಗಿದೆ. ಈಗ ಹೇಗೆ ತಪ್ಪಿಸಿಕೊಳ್ಳುತ್ತೀರಾ ಎಂಬುದನ್ನು ನೋಡುತ್ತೇನೆ. ಚಾಯ್ ವಾಲಾನ ಧೈರ್ಯ ನೋಡುತ್ತೀರಿ ಎಂದು ನರೇಂದ್ರ ಮೋದಿ ಹೇಳಿದರು.
2011-12ರಲ್ಲಿನ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧದ ತೆರಿಗೆಗೆ ಸಂಬಂಧಿಸಿದ ಪ್ರಕರಣದ ಪುನರ್ ಆರಂಭಕ್ಕೆ ಆದಾಯ ತೆರಿಗೆ ಇಲಾಖೆಗೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ.
Advertisement