ಮುಂಬೈ: ಪ್ರಧಾನಿ ನರೇಂದ್ರಮೋದಿ ಅವರಿಂದು ವಾಣಿಜ್ಯನಗರಿ ಮುಂಬೈಯಲ್ಲಿ ಎರಡು ಮೆಟ್ರೋ ಮಾರ್ಗ ಹಾಗೂ ರಿಯಾಯಿತಿ ದರದ ವಸತಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ್ ಮಂಥ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಹತ್ವಾಕಾಂಕ್ಷಿಯ ಥಾಣೆ- ಬಿವಾಂಡಿ- ಕಲ್ಯಾಣ್ ( ಮೆಟ್ರೋ 5) ಮತ್ತು ದಹಿಸರ್- ಮಿರಾ- ಬ್ಯಾಂಡರ್ ( ಮೆಟ್ರೋ9) ಮಾರ್ಗದ ಕಾಮಗಾರಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.
ನವಿ ಮುಂಬೈ ನಗರ ಯೋಜನಾ ಪ್ರಾಧಿಕಾರದಿಂದ ನಿರ್ಮಿಸಲಾಗುತ್ತಿರುವ 18 ಸಾವಿರ ಕೋಟಿ ರೂ. ಮೊತ್ತದ ಸಾಮೂಹಿಕ ವಸತಿ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಕೇಂದ್ರ ನಗರಾಭಿವೃದ್ದಿ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಥಾಣೆ- ಬಿವಾಂಡಿ- ಕಲ್ಯಾಣ್ ಮೆಟ್ರೋ ಕಾರಿಡಾರ್ ನಲ್ಲಿ 2021ರೊಳಗೆ ಪ್ರತಿದಿನ 2.29 ಲಕ್ಷ ಪ್ರಯಾಣಿಕರು ಸಂಚಾರಿಸಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಎಲ್ಲಾ ರೈಲುಗಳಿಗೆ ಆರು ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಈ ಕಾರಿಡಾರ್ ಲ್ಲಿ 17 ನಿಲ್ದಾಣಗಳಿವೆ.
10-3 ಕಿಲೋ ಮೀಟರ್ ಎತ್ತರಿಸಿದ ದಹಿಸರ್- ಮಿರಾ- ಬ್ಯಾಂಡರ್ ಕಾರಿಡಾರ್ ನಲ್ಲಿ 8 ನಿಲ್ದಾಣಗಳಿದ್ದು, 2022ರೊಳಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. 6,607 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ.
Advertisement