ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ವಾಜಪೇಯಿ ಅವರೊಂದಿಗೆ ಧೀರ್ಘ ಕಾಲ ಒಡನಾಟ ಹೊಂದಿದ್ದ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಸ್ಪೀಕರ್ ಸುಮಿತ್ರಾ ಮಹಾಜನ್, ವಿತ್ತ ಸಚಿವ ಅರುಣ್ ಜೇಟ್ಲಿ, ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದರು. ಜನ ಸಂಘವನ್ನು ಸ್ಥಾಪಿಸಿದ್ದರು. ಆದರೆ, ಪ್ರಜಾಪ್ರಭುತ್ವ ರಕ್ಷಣೆಯ ಸಂದರ್ಭ ಬಂದಾಗ ವಾಜಪೇಯಿ ಮತ್ತಿತರು ಜನತಾ ಪಾರ್ಟಿಗೆ ಸೇರಿದರು. ನಂತರ ಅದನ್ನು ತೊರೆದು ಬಿಜೆಪಿ ಸ್ಥಾಪಿಸಿದರು ಎಂದು ಸ್ಮರಿಸಿಕೊಂಡರು.
ವಾಜಪೇಯಿ ಅವರ ತತ್ವ ಆದರ್ಶಗಳನ್ನು ಪಾಲಿಸುವುದಾಗಿ ಹೇಳಿದ ಮೋದಿ ಮಂಗಳವಾರ ವಾಜಪೇಯಿ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.