ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಬಳಿಕ ಯಾರು ಮುಂದಿನ ಪ್ರಧಾನಿಯಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಲ್ಲುತ್ತಿದ್ದ ಬಾಬಾ ರಾಮ್ ದೇವ್ ಇದೀಗ ಮುಂದಿನ ಪ್ರಧಾನಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್, ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕಠಿಣವಾಗಿದೆ. ಈಗಲೇ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ತುಂಬಾ ಆಸಕ್ತಿಕರವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಾವು ಯಾವುದೇ ಪಕ್ಷದ ಪರವಾಗಿ ಅಥವಾ ವ್ಯಕ್ತಿಯ ಪರವಾಗಿ ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದ ಬಾಬಾ ರಾಮ್ ದೇವ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಯಾರನ್ನೂ ಬೆಂಬಲಿಸುವುದಿಲ್ಲಎಂದು ಹೇಳಿದ್ದಾರೆ. ಅಂತೆಯೇ ಪ್ರಸ್ತುತ ತಾವು ರಾಜಕೀಯದ ಕುರಿತು ಆಲೋಚನೆ ಮಾಡುತ್ತಿಲ್ಲ ಎಂದೂ ಹೇಳಿದ್ದಾರೆ.
'ನಾವು ಯಾವುದೇ ರೀತಿಯ ರಾಜಕೀಯ ಮತ್ತು ಧಾರ್ಮಿಕ ಅಜೆಂಡಾ ಹೊಂದಿಲ್ಲ. ಆದರೆ ನಾವು ಆದ್ಯಾತ್ಮಿಕ ದೇಶ ಮತ್ತು ವಿಶ್ವವನ್ನು ಬಯಸುತ್ತೇವೆ. ಯೋಗ ಮತ್ತು ವೇದಗಳ ಪ್ರಚಾರದ ಮೂಲಕ ದೈವಿಕ, ಶ್ರೀಮಂತ ಮತ್ತು ಆಧ್ಯಾತ್ಮಿಕ ಭಾರತವನ್ನು ನೋಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.