ನವದೆಹಲಿ: ಕಾರ್ವಿುಕರ ರಾಜ್ಯ ವಿಮಾ ನಿಗಮ(ಇಎಸ್ಐಸಿ)ದಲ್ಲಿ ಖಾಲಿ ಇರುವ ಐದು ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಹೇಳಿದ್ದಾರೆ.
ಇಂದು ದೆಹಲಿಯ ಮಯೂರ ವಿಹಾರದಲ್ಲಿ ನಡೆದ ಇಎಸ್ಐ ಆಸ್ಪತ್ರೆ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಗಂಗ್ವಾರ್ ಅವರು, ಇಎಸ್ಐಸಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಖಾಲಿ ಇರುವ 5 ಸಾವಿರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಇಎಸ್ಐಸಿ ಆಸ್ಪತ್ರೆಯಲ್ಲಿ ನಾಲ್ವರು ವೈದ್ಯರು, ಹೊರ ರೋಗಿಗಳ ವಿಭಾಗ ಹಾಗೂ ಪ್ರಯೋಗಾಲಯ ಸೇವೆಗಳು ಲಭ್ಯವಿರಲಿದ್ದು, 6,800 ಚದರ ಅಡಿ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಗಂಗ್ವಾರ್ ಅವರು ತಿಳಿಸಿದರು.
ಇದೇ ವೇಳೆ ಗ್ರೇಟರ್ ನೋಯ್ಡಾದಲ್ಲೂ ಇಎಸ್ಐಸಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದ್ದಾರೆ.