ಅಯೋಧ್ಯೆ ರಾಮಮಂದಿರ ವಿರೋಧಿಸುವ ಮುಸ್ಲಿಮರು ಪಾಕ್'ಗೆ ಹೋಗಲಿ: ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಲಿ ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಸೀಮ್ ರಿಜ್ವಿಯವರು ಶನಿವಾರ ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಫೈಜಾಬಾದ್: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಲಿ ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಸೀಮ್ ರಿಜ್ವಿಯವರು ಶನಿವಾರ ಹೇಳಿದ್ದಾರೆ. 
ರಾಮ ಜನ್ಮಭೂಮಿ, ಬಾಬ್ರಿ ಮಸೀದಿ ವಿಚಾರಗಳ ಕುರಿತಂತೆ ಫೆ.8 ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. 
ಅಯೋಧ್ಯೆಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ರಿಜ್ವಿ ಅವರು, ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಸ್ಥಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸುತ್ತಿರುವವರು ಮೂಲಭೂತ ಮನಃಸ್ಥಿತಿಯುಳ್ಳವರಾಗಿದ್ದು, ಅಂತಹ ಜನರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹೋಗಬೇಕು. ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಜಾಗವಿಲ್ಲ ಎಂದು ಹೇಳಿದ್ದಾರೆ. 
ಮಸೀದಿ ಹೆಸರಿನಲ್ಲಿ ಎಲ್ಲೆಡೆ ಜಿಹಾದ್ ಹರಡುತ್ತಿರುವವಹು ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಹೋಗಿ ಸಿರಿಯಾದಲ್ಲಿರುವ ಇಸಿಸ್ ಮುಖ್ಯಸ್ಥ ಅಬು ಬಕರ್ ಬಾಗ್ದಾದಿ ಸಂಘಟನೆಗೆ ಸೇರ್ಪಡೆಗೊಳ್ಳಬೇಕು. ಮೂಲಭೂತ ಮನಃಸ್ಥಿತಿಯುಳ್ಳ ಮುಸ್ಲಿಂ ಮೌಲ್ವಿಗಳು ದೇಶವನ್ನು ನಾಶ ಮಾಡಲು ಯತ್ನ ನಡೆಸುತ್ತಿದ್ದಾರೆ. ಅಂತಹವರನ್ನು ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳಿಗೆ ಗಡಿಪಾರು ಮಾಡಬೇಕೆಂದು ತಿಳಿಸಿದ್ದಾರೆ. 
ರಿಜ್ವಿಯವರ ಹೇಳಿಕೆಗೆ ಪ್ರತಿಕ್ರಿಯೆನೀಡಿರುವ ಶಿಯಾ ಮೌಲ್ವಿಗಳು, ರಿಜ್ವಿಯವರು ಕೋಮುವಾದಿ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಕೂಡಲೇ ಅವರನ್ನು ಬಂಧನಕ್ಕೊಳಪಡಿಸಬೇಕೆಂದು ಆಗ್ರಹಿಸಿದ್ದಾರೆ. 
ಶಿಯಾ ಉಲೇಮಾ ಮಂಡಳಿಯ ಅಧ್ಯಕ್ಷ ಮೌಲಾನಾ ಇಫ್ತೇಖಾರ್ ಹುಸೇನ್ ಇಂಕ್ವಿಲಾಭಿ ಮಾತನಾಡಿ, ರಿಜ್ವಿಯವರು ಕ್ರಿಮಿನಲ್ ಪ್ರಕರಣಗಳಲ್ಲಿ ದಾಖಲಾಗಿದ್ದು, ವಕ್ಫ್ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಸಿಬಿಐ-ಸಿಐಡಿ ಅಧಿಕಾರಿಗಳು ಆತನ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದ ರಕ್ಷಣೆಗೊಳ್ಳಲು ಈ ರೀತಿಯ ನಾಟಕವಾಡುತ್ತಿದ್ದಾರೆಂದು ತಿಳಿಸಿದ್ದಾರೆ. 
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಆಡಳಿತ ನಡೆಸುತ್ತಿದ್ದಾಗ ಮುಲಾಯಂ ಪರವಾಗಿದ್ದರು. ಬಳಿಕ ಅಜಂಖಾನ್ ಪರವಾದರು, ಇದೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಇದೀಗ ಮತ್ತೆ ತಮ್ಮ ನಾಟಕವನ್ನು ಆರಂಭಿಸಿದ್ದಾರೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com