ಹೈದರಾಬಾದ್ ಗರ್ಭಿಣಿಯ ಬರ್ಬರ ಕೊಲೆಗೆ ಎರಡು ವಿವಾಹೇತರ ಅಕ್ರಮ ಸಂಬಂಧ ಕಾರಣ!

ವಿವಾಹೇತರ ಅಕ್ರಮ ಸಂಬಂಧದಿಂದಾಗಿ ಹೈದರಾಬಾದ್ ನ 8 ತಿಂಗಳ ತುಂಬು ಗರ್ಭಿಣಿ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ...
ಹೈದರಾಬಾದ್: ವಿವಾಹೇತರ ಅಕ್ರಮ ಸಂಬಂಧದಿಂದಾಗಿ ಹೈದರಾಬಾದ್ ನ 8 ತಿಂಗಳ ತುಂಬು ಗರ್ಭಿಣಿ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. 
ಜನವರಿ 31ರಂದು ಕೊಂಡಾಪುರ ಬೊಟಾನಿಕಲ್ ಗಾರ್ಡನ್ ಬಳಿ ಗೋಣಿಚೀಲದಲ್ಲಿ ತುಂಬಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಾಧ್ಯಮಗಳ ಮುಂದೆ ಹಾಜರುಪಡಿಸಿದರು. 
ಮೃತ ಮಹಿಳೆಯನ್ನು ಬಿಹಾರ ಮೂಲದ ಪಿಂಕಿ ಎಂದು ತಿಳಿದುಬಂದಿದ್ದು ಬಂಧಿತ ಆರೋಪಿಗಳು ಬಿಹಾರದವರೆ. ಪಿಂಕಿ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ತನ್ನ ಗಂಡನಿಂದ ದೂರವಾಗಿ ಬಳಿಕ ವಿಕಾಸ್ ಜತೆ ಜೀನವ ನಡೆಸುತ್ತಿದ್ದರು. ವಿಕಾಸ್ ಕೂಡ ಬಿಹಾರ ಮೂಲದವನಾಗಿದ್ದು ಮಮತಾ ಎಂಬ ಮತ್ತೊಬ್ಬ ಮಹಿಳೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. 
ಮಮತಾ ಆಕೆಯ ಗಂಡ ಅನಿಲ್ ಜಾ ಹಾಗೂ ಮಗ ಅಮರ್ ಕಾಂತ್ ಜಾ ಕೆಲವು ವರ್ಷಗಳ ಹಿಂದೆ ಹೈದರಾಬಾದ್ ಗೆ ವಲಸೆ ಬಂದಿದ್ದರು. ವಿಕಾಸ್ ಕೂಡ ಹೈದರಾಬಾದ್ ಗೆ ಬಂದು ಮಮತಾ ಕುಟುಂಬದ ಜತೆ ನೆಲೆಸಿದ್ದ. ಅಲ್ಲಿಗೆ ವಿಕಾಸ್ ಎಲ್ಲಿದ್ದಾನೆಂಬ ಮಾಹಿತಿ ಪಡೆದ ಪಿಂಕ್ ಕೂಡ ಹೈದರಾಬಾದ್ ಗೆ ಶಿಫ್ಟ್ ಆಗಿದ್ದಳು. 
ವಿಕಾಸ್ ಮತ್ತು ಮಮತಾ ಸಂಬಂಧದ ಬಗ್ಗೆ ಪಿಂಕಿ ಪ್ರಶ್ನೆ ಮಾಡಿದ್ದಳು ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ನಂತರ ಶವವನ್ನು ಸ್ಟೋನ್ ಕಟ್ಟರ್ ಬಳಸಿ ದೇಹವನ್ನು ಭಾಗಗಳಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಬಿಸಾಡಿ ಹೋಗಿದ್ದರು. 
ಯಾವುದೇ ಸುಳಿವು ಸಿಗದ ಕಾರಣ ಆರೋಪಿಗಳು ಶವವನ್ನು ಎಸೆದಿದ್ದ ಸ್ಥಳದಲ್ಲಿ ಪೊಲೀಸರು 150 ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದರು. ಅದರಲ್ಲಿ ಇಬ್ಬರು ಬೈಕ್ ನಲ್ಲಿ ಭಾರವಾದ ಬ್ಯಾಗ್ ಹೊತ್ತೊಯ್ಯುತ್ತಿದ್ದುದ್ದು ಕಂಡುಬಂದಿತ್ತು. ಮಹಿಳೆ ಬ್ಯಾಗ್ ಹಿಡಿದುಕೊಂಡಿದ್ದು ಮತ್ತೊಬ್ಬ ಬೈಕ್ ಓಡಿಸುತ್ತಿದ್ದ. ಶವ ಪತ್ತೆಯಾದ ಸ್ಥಳದಲ್ಲಿ ಈ ಇಬ್ಬರೂ ಕೆಲ ಕಾಲ ಬೈಕ್ ನಿಲ್ಲಿಸಿ ಮುಂದೆ ಸಾಗಿದ್ದರಿಂದ ಶಂಕೆ ಮೂಡಿ ಪೊಲೀಸರು ಆ ಬೈಕ್ ಟ್ರೇಸ್ ಮಾಡಿ ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. 
ಬಂಧಿತ ಆರೋಪಿಗಳನ್ನು ಮಮತಾ ಜಾ, ಅನಿಲ್ ಜಾ, ಅಮರ್ ಕಾಂತ್ ಜಾ ಹಾಗೂ ವಿಕಾಸ್ ಎಂದು ಗುರುತಿಸಲಾಗಿದೆ. ಇವರಲ್ಲಿ ವಿಕಾಸ್ ಹಾಗೂ ಅಮರ್ ಕಾಂತ್ ತಲೆಮರೆಸಿಕೊಂಡಿದ್ದು ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com