ನವದೆಹಲಿ: ಪೋಷಕರ ಮೇಲಿನ ದ್ವೇಷಕ್ಕೆ ಅವರ ಏಳು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
7 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಅವದೀಶ್ ನನ್ನು ಸೋಮವಾರ ರಾತ್ರಿ ಬಂಧಿಸಲಾಗಿದ್ದು, ಆರೋಪಿ ಬಾಲಕನ ಕುಟಂಬಕ್ಕೆ ಪರಿಚಿತನಾಗಿದ್ದು, ದೂರದ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಬಾಲಕ ಆಶಿಶ್ ಪಶ್ಚಿಮ ದೆಹಲಿಯ ಸ್ವರೂಪ್ ನಗರ ನಿವಾಸಿಯಾಗಿದ್ದು, ಆತನ ನಿವಾಸದ ಬಳಿಯೇ ಆರೋಪಿ ಅವದೀಶ್ ಸಹ ವಾಸಿಸುತ್ತಿದ್ದ.
ಆಶಿಶ್ ಪೋಷಕರು ತಾನು ಇಲ್ಲದ ವೇಳೆ ತನ್ನನ್ನು ನಿಂದಿಸುತ್ತಿದ್ದರು ಮತ್ತು ತಾನು ಅವರ ಮನೆಗೆ ಹೋಗುವುದನ್ನು ಅವರು ಇಷ್ಟಪಡುತ್ತಿರಲಿಲ್ಲ ಎಂದು ಆರೋಪಿ ಅವದೀಶ್ ಪೊಲೀಸರಿಗೆ ಹೇಳಿರುವುದಾಗಿ ಪೊಲೀಸ್ ಉಪ ಆಯುಕ್ತ ಅಸ್ಲಾಮ್ ಖಾನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅವದೀಶ್ ಆಶಿಶ್ ನನ್ನು ಹತ್ಯೆ ಮಾಡಿ, ಮೃತದೇಹವನ್ನು ಕಬೋರ್ಡ್ ನಲ್ಲಿಟ್ಟಿದ್ದ. ರಸ್ತೆಯಲ್ಲಿ ಸಿಸಿಟಿವಿ ಇರುವುದರಿಂದ ಮೃತದೇಹವನ್ನು ಹೊರ ಸಾಗಿಸುವ ಯತ್ನ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.