ಚೆನ್ನೈ: ನಾನು ರಾಜಕೀಯ ಪ್ರವೇಶಿಸುವ ಮುನ್ನ ನನ್ನ ಸಮಕಾಲೀನ ನಟ ಹಾಗೂ ಸ್ನೇಹಿತ ರಜನಿಕಾಂತ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಹೇಳಿಕೊಂಡಿದ್ದಾರೆ.
ನಿನ್ನೆಯಷ್ಟೇ ತಮ್ಮ ನೂತನ ರಾಜಕೀಯ ಪಕ್ಷ ಮಕ್ಕಳ್ ನೀಥಿ ಮಯ್ಯಂ ಘೋಷಿಸಿದ ಕಮಲ್ ಹಾಸನ್ ಅವರು ರಜನಿಕಾಂತ್ ಅವರನ್ನು ಯಾವಾಗ ಭೇಟಿ ಮಾಡಿದ್ದರು ಎಂಬುದನ್ನು ಹೇಳಿಲ್ಲ. ಆದರೆ ಮುಂದೆ ರಾಜಕೀಯದಲ್ಲಿ ವೈರಿಗಳಾದರೂ ಪರಸ್ಪರ ಗೌರವ ಉಳಿಸಿಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ತಮಿಳು ನಿಯತಕಾಲಿಕೆ ಆನಂದ ವಿಕಟನ್ ನಲ್ಲಿ ಕಮಲ್ ಹಾಸನ್ ಬರೆದುಕೊಂಡಿದ್ದು, ಬಿಗ್ ಬಾಸ್ ಕಾರ್ಯಕ್ರಮದ ಚಿತ್ರಕರಣದ ವೇಳೆ ರಜನಿಕಾಂತ್ ಅವರನ್ನು ಭೇಟಿ ಮಾಡಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ.
ತಮಿಳು ಬಿಗ್ ಬಾಸ್ ಕಾರ್ಯಕ್ರಮದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಸಮೀಪವೇ ರಜನಿಕಾಂತ್ ಅವರ ಕಾಳ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಹೀಗಾಗಿ ನಾನೇ ಭೇಟಿಯ ವಿಷಯ ಪ್ರಸ್ತಾಪಿಸಿದೆ ಎಂದು ಕಮಲ್ ತಿಳಿಸಿದ್ದಾರೆ.