ಮುಂಬೈ: ಪ್ರೇಕ್ಷಕರು ಚಿತ್ರಮಂದರಿಗಳಲ್ಲೇ ತಿಂಡಿ, ತಿನಿಸು ಹಾಗೂ ಪಾನಿಯಾಗಳನ್ನು ಏಕೆ ಖರೀದಿಸಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.
ಮಹಾರಾಷ್ಟ್ರಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಹೊರಗಿನ ತಿಂಡಿ, ತಿನಿಸು ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಸಂಬಂಧ ಒಂದು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
ಸೆಕ್ಯೂರಿಟಿ ಗಾರ್ಡ್ ಗಳು ಸಿನಿಮಾ ಹಾಲ್ ಪ್ರವೇಶಿಸುವ ಮುನ್ನ ಭದ್ರತೆಯ ದೃಷ್ಟಿಯಿಂದ ಪ್ರೇಕ್ಷಕರ ಬ್ಯಾಗ್ ಗಳನ್ನು ಪರಿಶೀಲಿಸುತ್ತಿರಬೇಕಾದರೆ ಆಹಾರ ಪಾದರ್ಥಗಳನ್ನು ಚಿತ್ರಮಂದಿರಗಳಲ್ಲೇ ಖರೀದಿಸಬೇಕು ಎಂದು ಒತ್ತಡ ಹೇರುವುದು ಎಷ್ಟು ಸರಿ ಎಂದು ನ್ಯಾಯಮೂರ್ತಿ ಆರ್ ಎಂ ಬೋರ್ಡೆ ಹಾಗೂ ನ್ಯಾಯಮೂರ್ತಿ ರಾಜೇಶ್ ಕೆಟ್ಕಾರ್ ಅವರು ಪ್ರಶ್ನಿಸಿದ್ದಾರೆ.
ಚಿತ್ರಮಂದರಿಗಳಲ್ಲಿ ಹೊರಗಿನ ಆಹಾರ ನಿಷೇಧ ಪ್ರಶ್ನಿಸಿ ಮುಂಬೈ ನಿವಾಸಿ ಜೈನೇಂದ್ರ ಬಕ್ಸಿ ಅವರು ತಮ್ಮ ವಕೀಲ ಆದಿತ್ಯ ಪ್ರತಾಪ್ ಅವರ ಮೂಲಕ ಪಿಐಎಲ್ ಸಲ್ಲಿಸಿದ್ದರು.