ದೇಶ
ಪ್ರದ್ಯುಮನ್ ಹತ್ಯೆ ಪ್ರಕರಣ: ಆರೋಪಿ ಜಾಮಿನು ಅರ್ಜಿ ತಿರಸ್ಕರಿಸಿದ ಗುರುಗ್ರಾಮ್ ಕೋರ್ಟ್
ರಿಯಾನ್ ಇಂಟರ್'ನ್ಯಾಷನಲ್ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕ ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 16 ವರ್ಷದ ಆರೋಪಿಗೆ ಜಾಮೀನು ನೀಡಲು ಗುರುಗ್ರಾಮ ನ್ಯಾಯಾಲಯ ಸೋಮವಾರ ನಿರಾಕರಿಸಿದೆ...
ಗುರ್ಗಾಂವ್: ರಿಯಾನ್ ಇಂಟರ್'ನ್ಯಾಷನಲ್ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕ ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 16 ವರ್ಷದ ಆರೋಪಿಗೆ ಜಾಮೀನು ನೀಡಲು ಗುರುಗ್ರಾಮ್ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.
ಪ್ರದ್ಯುಮನ್ ಹತ್ಯೆ ಪ್ರಕರಣ ಸಂಬಂಧ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಸ್ಬೀರ್ ಸಿಂಗ್ ಕುಂದು ಅವರು, ಜಾಮೀನು ನೀಡಲು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.
ಜಾಮೀನು ಅರ್ಜಿ ಕುರಿತಂತೆ ಈ ಹಿಂದೆ ನಡೆದ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲ ಹಾಗೂ ಸಿಬಿಐ ಆಧಿಕಾರಿಗಳು ವಾದ ಹಾಗೂ ಪ್ರತಿವಾದ ಮಂಡಿಸಿದ್ದರು. ಬಳಿಕ ನ್ಯಾಯಾಲಯ ಆದೇಶವನ್ನು ತಡೆಹಿಡಿದಿತ್ತು.
ಇದರಂತೆ ಇಂದು ನಡೆದ ವಿಚಾರಣೆ ವೇಳೆ ಆರೋಪಿಯ ಪರವಕೀಲ. ಬಾಲಾಪರಾಧಿ ನ್ಯಾಯ ಮಸೂದೆಯ ಪ್ರಕಾರ ಅಧಿಕಾರಿಗಳು ಚಾರ್ಜ್ ಶೀಟ್'ನ್ನು 1 ತಿಂಗಳೊಳಗಾಗಿ ಸಲ್ಲಿಸಬೇಕಿತ್ತು. ಆದರೆ, ಅಧಿಕಾರಿಗಳು ಅದನ್ನು ಮಾಡಿಲ್ಲ ಹಾಗೂ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ವಾದ ಮಂಡಿಸಿದರು.
ಇದಕ್ಕೆ ವಿರೋಧಿಸಿದ ಸಿಬಿಐ, ಆರೋಪಿಯನ್ನು ಬಾಲ ನ್ಯಾಯ ಮಂಡಳಿ ವಯಸ್ಕನೆಂದು ಘೋಷಣೆ ಮಾಡಿದೆ. ಸಿಆರ್'ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) ನಿಂಬಧನೆಗಳ ಪ್ರಕಾರ ಚಾರ್ಜ್ ಶೀಟ್ ಸಲ್ಲಿಸಲು 90 ದಿನಗಳ ಕಾಲಾವಕಾಶವಿರುತ್ತದೆ ಎಂದು ಪ್ರತಿವಾದ ಮಂಡಿಸಿದೆ. ಬಳಿಕ ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.
ಸೆ.8 ರಂದು ರಿಯಾನ್ ಇಂಟರ್ ನ್ಯಾಷನಲ್ ಶಾಲೆಯ ಶೌಚಾಲಯದಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್ ಎಂಬ ಬಾಲಕನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ವಿದ್ಯಾರ್ಥಿ ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದ್ದ. ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಬಾಲಕನನ್ನು ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದ.