ಸಂಗ್ರಹ ಚಿತ್ರ
ದೇಶ
ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್
ಅಂತರ್ಜಾತಿ ವಿವಾಹವಾದ ದಂಪತಿಗಳ ಮೇಲೆ ಹಲ್ಲೆ ಮಾಡುವ ಕಾಪ್ ಪಂಚಾಯಿತಿಯ ನಿರ್ಧಾರ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ನವದೆಹಲಿ: ಅಂತರ್ಜಾತಿ ವಿವಾಹವಾದ ದಂಪತಿಗಳ ಮೇಲೆ ಹಲ್ಲೆ ಮಾಡುವ ಕಾಪ್ ಪಂಚಾಯಿತಿಯ ನಿರ್ಧಾರ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿದ್ದು, ವಯಸ್ಕ ಯುವಕ-ಯುವತಿ ಅಂತರ್ಜಾತಿ ವಿವಾಹವಾದರೆ ಅದು ತಪ್ಪಲ್ಲ.. ಅಂತರ್ಜಾತಿ ವಿವಾಹವಾಗಿದ್ದಾರೆ ಎಂಬ ಕಾರಣಕ್ಕೇ ಅವರ ಮೇಲೆ ಹಲ್ಲೆ ಅಥವಾ ಇನ್ನಾವುದೇ ಕ್ರಮಕ್ಕೆ ಮುಂದಾದರೆ ಅದನ್ನು ಕಾನೂನು ಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಅಂತರ್ಜಾತಿ ವಿವಾಹವಾದರು ಎಂಬ ಕಾರಣಕ್ಕೆ ಕಾಪ್, ಪಂಚಾಯಿತಿ, ಸಂಘ ಸಂಸ್ಥೆಗಳು ಅಥವಾ ಬೇರೆ ವ್ಯಕ್ತಿಗಳು ಹಲ್ಲೆ ಮಾಡಬಾರದು ಮತ್ತು ಯಾವೇದೇ ರೀತಿಯ ವ್ಯತಿರಿಕ್ತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಹೇಳಿದೆ.
ಕಾಪ್ ಪಂಚಾಯಿತಿಯಲ್ಲಿನ ಪ್ರಕರಣವೊಂದರ ಸಂಬಂಧ ಕಾಪ್ ಸಮುದಾಯದಲ್ಲಿ ಅಂತರ್ಜಾತಿ, ಅಂತರ್ ಧರ್ಮ ಅಂತರ್ ಗೋತ್ರದ ವಿವಾಹಗಳು ನಿಷಿದ್ಧ ಎಂಬ ಆ್ಯಮಿಕಸ್ ಕ್ಯೂರಿ ರಾಜು ರಾಮಚಂದ್ರನ್ ಅವರ ಸಲಹೆಯನ್ನು ಉಲ್ಲೇಖಿಸಿದ ಪೀಠ, ಭಾರತೀಯ ಸಂವಿಧಾನದ ಅನ್ವಯ ಅಂತರ್ಜಾತಿ, ಅಂತರ್ ಧರ್ಮದ ವಿವಾಹಗಳಿಗೆ ನಿರ್ಬಂಧವಿಲ್ಲ. ವಯಸ್ಕ ಯುವಕ-ಯುವತಿಯರು ತಾವು ಇಚ್ಛಿಸಿದವರೊಂದಿಗೆ ವಿವಾಹವಾಗಬಹುದು. ಇದಕ್ಕೆ ಯಾವುದೇ ಧರ್ಮ ಮತ್ತು ಜಾತಿಯ ಅಡ್ಡಿಇಲ್ಲ ಎಂದು ಹೇಳಿದೆ.
ಅಂತೆಯೇ ಪ್ರಕರಣ ಹೆಚ್ಚಿನ ವಿಚಾರಣೆಗಾಗಿ ಫೆಬ್ರವರಿ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇನ್ನು ಭಾರತದ ವಿವಿಧ ರಾಜ್ಯಗಳ ಗ್ರಾಮಗಳಲ್ಲಿರುವ ಕಾಪ್ ಪಂಚಾಯಿತಿಯ ಕಠಿಣ ಶಿಕ್ಷೆಗಳ ಕುರಿತಂತೆ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಕಾಪ್ ಪಂಚಾಯಿತಿಯ ಅಸ್ತಿತ್ವದ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಮಹತ್ವ ವಿಚಾರಣೆ ನಡೆಯುತ್ತಿದೆ. ಇನ್ನು ಈ ಪ್ರಕರಣ ಸಂಬಂಧ ಶಕ್ತಿ ವಾಹಿನಿ ಎನ್ ಜಿಎ ಮತ್ತು ಆ್ಯಮಿಕಸ್ ಕ್ಯೂರಿ ಅವರ ವರದಿ ಕೇಳಲಾಗಿದ್ದು, ಇತ್ತೀಚೆಗೆ ಆ್ಯಮಿಕಸ್ ಕ್ಯೂರಿ ವರದಿ ನೀಡಿದ್ದರು. ಇನ್ನು ಶಕ್ತಿ ವಾಹಿನಿ ಎನ್ ಜಿಎ ದೇಶದಲ್ಲಿ ಕಾಪ್ ಪಾಂಚಾಯಿತಿಗಳು ನೀಡುವ ಅಮಾನವೀಯ ಮತ್ತು ಕಠಿಣ ಶಿಕ್ಷೆಗಳ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಇದಕ್ಕಿ ನಿಯಂತ್ರಣ ಹೇರುವಂತೆ ಮನವಿ ಮಾಡಿಕೊಂಡಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ