ನ್ಯಾಯಾಧೀಶರಾದ ಎ.ಕೆ. ಸಿಕ್ರಿ, ಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ ನೂತನ ಸಾಂವಿಧಾನಿಕ ಪೀಠವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ರಚನೆ ಮಾಡಿದ್ದಾರೆ. ದೇಶದ ಪ್ರಮುಖ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ನಿರ್ಣಾಯ ಪಾತ್ರ ವಹಿಸುವ ಸಾಂವಿಧಾನಿಕ ಪೀಠದಿಂದ ಬಂಡಾಯ ನ್ಯಾಯಾಧೀಶರಾದ ಜಸ್ತಿ ಚೆಲಾಮೇಶ್ವರ್, ರಂಜನ್ ಗೊಗೊಯಿ, ಎಂಬಿ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರನ್ನು ದೂರವಿಡಲಾಗಿದೆ. ಈ ನಾಲ್ವರೂ ಪ್ರಸ್ತುತ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ಇವರನ್ನೇ ಸಾಂವಿಧಾನಿಕ ಪೀಠದಿಂದ ದೂರವಿಟ್ಟಿರುವುದು ಹಲವರ ಹುಬ್ಬೇರಿಸಿದೆ. ಅಲ್ಲದೇ ಇದೇ ಕಾರಣಕ್ಕೆ ಬಂಡಾಯ ನ್ಯಾಯಾಧೀಶರೂ ಕೂಡ ಸಿಜಿಐ ದೀಪಕ್ ಮಿಶ್ರಾ ಅವರ ವಿರುದ್ಧ ಬಹಿರಂಗವಾಗಿಯೇ ಈ ಹಿಂದಿನ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.