ಹರಿಯಾಣ: 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಶನಿವಾರ ಹರಿಯಾಣದ ಯಮುನನಗರದಲ್ಲಿ ನಡೆದಿದೆ.
12ನೇ ತರಗತಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ತನ್ನ ತಂದೆಯ ಪರವಾನಗಿ ಹೊಂದಿರುವ ಬಂದೂಕನ್ನು ಬಳಸಿ ಪ್ರಾಂಶುಪಾಲರಾದ ರಿಟಾ ಛಾಬ್ರಾ ಅವರನ್ನು ಶಾಲೆಯ ಅವರ ಕೊಠಡಿಯಲ್ಲೇ ಗುಂಡು ಹರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಛಾಬ್ರಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪೊಲೀಸ್ ಮೂಲಗಳ ಪ್ರಕಾರ, ಕೊಲೆ ಮಾಡಿದ 12ನೇ ತರಗತಿ ವಿದ್ಯಾರ್ಥಿಯನ್ನು ತಾತ್ಕಾಲಿಕವಾಗಿ ಶಾಲೆಯಿಂದ ಹೊರಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದ ವಿದ್ಯಾರ್ಥಿ ಪ್ರಾಂಶುಪಾಲರನ್ನು ಭೇಟಿಯಾಗಬೇಕು ಎಂದು ಹೇಳಿದ್ದ. ಬಳಿಕ ನೇರವಾಗಿ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬಂದೂಕಿನಿಂದ ಗುಂಡು ಹರಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಶಾಲೆಯ ಜವಾನ ಸೇರಿದಂತೆ ಆರು ಮಂದಿ ಸಿಬ್ಬಂದಿ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಪೊಲೀಸರು 12ನೇ ತರಗತಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.